ಬೆಂಗಳೂರು: ಪಶ್ಚಿಮ ಬಂಗಾಳದ ಮಹಿಳೆಯ ಮೇಲೆ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಅಮಾನವೀಯವಾಗಿ ಹಲ್ಲೆಗೈದಿರುವ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ವೈಟ್ಫೀಲ್ಡ್ ವಿಭಾಗದ ಡಿಸಿಪಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಇಂದು ಪ್ರತಿಕ್ರಿಯಿಸಿದ ಅವರು, ಪೊಲೀಸ್ ಸಿಬ್ಬಂದಿಯ ತಪ್ಪು ಸಾಬೀತಾದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಘಟನೆಯ ವಿವರ: ಸುಂದರಿ ಬೀಬಿ (34) ಅವರು ವರ್ತೂರು ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 31ರಂದು ಫ್ಲ್ಯಾಟ್ನಲ್ಲಿ ಕಸ ಗುಡಿಸುವಾಗ 100 ರೂಪಾಯಿ ಕಳೆಗೆ ಬಿದ್ದಿರುವುದನ್ನು ಮಾಲೀಕರಿಗೆ ಕೊಟ್ಟಿದ್ದಾರೆ. ಆದರೆ ಹಣದ ಜೊತೆಗೆ ಮನೆಯಲ್ಲಿ ಚಿನ್ನದ ಉಂಗುರ ಕಳ್ಳತನವಾಗಿದೆ ಎಂದು ಆರೋಪಿಸಿದ್ದ ಮಾಲೀಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಂತರ, ಸುಂದರಿ ಬೀಬಿ ಹಾಗೂ ಆಕೆಯ ಪತಿಯನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು ಹಲ್ಲೆಗೈದಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಮಧ್ಯಪ್ರವೇಶಿಸಿದ ಬಳಿಕ ದಂಪತಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು.
ಪಶ್ಚಿಮ ಬಂಗಾಳದ ತಲುಪಿದ ಪ್ರಕರಣ: ಪೊಲೀಸರ ವಿರುದ್ಧದ ಆರೋಪ ಪಶ್ಚಿಮ ಬಂಗಾಳ ಸರ್ಕಾರವನ್ನು ತಲುಪಿದ್ದು, ಸುಂದರಿ ಬೀಬಿಯನ್ನು ಸಂಪರ್ಕಿಸಿರುವ ಸರ್ಕಾರವು, ಬೆಂಗಳೂರು ಪೊಲೀಸರ ವರ್ತನೆಯನ್ನ ಖಂಡಿಸಿತ್ತು. ಪಶ್ಚಿಮ ಬಂಗಾಳ ಸಂಸದ ಸಮೀರ್ ಉಲ್ ಅವರು ನೊಂದ ಮಹಿಳೆಗೆ ಕಾನೂನು ನೆರವಿನ ಭರವಸೆ ನೀಡಿದ್ದರು. ಮತ್ತೊಂದೆಡೆ, ಘಟನೆಯ ಗಂಭೀರತೆ ಅರಿತಿರುವ ರಾಜ್ಯ ಮಹಿಳಾ ಆಯೋಗ ಸಹ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದೆ.
Laxmi News 24×7