ಬೀದರ್: ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಗೆ ಕಾರಣವಾಗಿರುವ ಮೊಂಥಾ ಚಂಡಮಾರುತ ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲೂ ರೈತರ ನಿದ್ದೆಗೆಡಿಸಿದೆ.
ಸೋಮವಾರ ಸ್ವಲ್ಪ ಮಳೆಯಾದರೆ, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಜಿಲ್ಲೆಯ ಬಹುತೇಕ ಕಡೆ ವರುಣ ಆರ್ಭಟಿಸಿತು. ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ಆಗಾಗ್ಗೆ ಎಲ್ಲೆಡೆ ಮಳೆ ಸುರಿದಿದೆ. ಮಳೆಯೊಂದಿಗೆ ಚಳಿ ಗಾಳಿ ಸಹ ಬೀಸುತ್ತಿದ್ದು, ಇದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಕಳೆದ ರಾತ್ರಿಯಿಂದ ಬೆಳಗ್ಗೆವರೆಗೆ ನಾಲ್ಕೈದು ಗಂಟೆಗಳಲ್ಲೇ ಜಿಲ್ಲೆಯಲ್ಲಿ ಸರಾಸರಿ 60 ಮಿಲಿ ಮೀಟರ್ ಮಳೆಯಾದರೆ, ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೆ ಮತ್ತೆ ಸರಾಸರಿ 30 ಮಿ.ಮೀ.ನಷ್ಟು ಮಳೆ ಸುರಿದಿದೆ. ಒಂದೇ ದಿನದಲ್ಲಿ 90 ಮಿ.ಮೀ.ನಷ್ಟು ಮಳೆಯಾಗಿರುವುದು ಚಳಿಗಾಲದಲ್ಲಿ ಈವರೆಗಿನ ದಾಖಲೆ ಎನಿಸಿದೆ.
ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಸೋಯಾಬೀನ್, ಉದ್ದು, ಹೆಸರು ಸೇರಿದಂತೆ ಬಹುತೇಕ ಬೆಳೆಗಳು ನೀರುಪಾಲಾಗಿದ್ದರಿಂದ ರೈತರು ದಿಕ್ಕುತೋಚದಂತಾಗಿದ್ದರು. ಈ ಮಧ್ಯೆ ಮತ್ತೆ ಸುರಿಯುತ್ತಿರುವ ವ್ಯಾಪಕ ಮಳೆ ಹಿಂಗಾರು ಕೃಷಿ ಮೇಲೂ ಕಾರ್ಮೋಡ ಆವರಿಸಿದೆ. ಅಲ್ಲಲ್ಲಿ ಬಿತ್ತನೆಯಾಗಿರುವ ಕಡಲೆ, ಬಿಳಿಜೋಳ ಮೊಳಕೆ ಹಂತದಲ್ಲೇ ಹಾಳಾಗಿರುವುದು, ರೈತರಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 1.51 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಸೆಪ್ಟಂಬರ್ ಅಂತ್ಯದವರೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಈಗಾಗಲೇ ಹಿಂಗಾರು ಬಿತ್ತನೆಗೆ ವಿಳಂಬವಾಗಿದೆ. ಕಡಲೆ ಹಾಗೂ ಬಿಳಿಜೋಳ ಹಿಂಗಾರಿನ ಪ್ರಮುಖ ಬೆಳೆಗಳಾಗಿವೆ. ಕಡಲೆ 85 ಸಾವಿರ ಹೆಕ್ಟೇರ್ ಹಾಗೂ ಬಿಳಿಜೋಳ 36 ಸಾವಿರ ಹೆಕ್ಟೇರ್ನಲ್ಲಿ ಬಿತ್ತುವ ಗುರಿಯಿದೆ. ರೈತರು ಬಿತ್ತನೆಗೆ ಸಿದ್ಧವಾಗಿದ್ದಾರೆ. ಆದರೆ ಹೊಲದಲ್ಲಿ ಹೆಚ್ಚಿನ ತೇವಾಂಶವಿರುವ ಕಾರಣ ಹೆಚ್ಚಿನವರು ಇನ್ನೂ ಬೀಜ ಬಿತ್ತಿಲ್ಲ. ಅಲ್ಲಲ್ಲಿ ಕೆಲವೆಡೆ ರೈತರು ಹತ್ತು ದಿನಗಳ ಹಿಂದೆ ಕಡಲೆ ಬಿತ್ತಿದ್ದು, ಮೊಳಕೆಯುಡುತ್ತಿರುವ ಹೊತ್ತಿನಲ್ಲಿ ಶುರುವಾದ ಮಳೆಯಾರ್ಭಟಕ್ಕೆ ಇದು ನೀರುಪಾಲಾಗಿದೆ.
Laxmi News 24×7