ಹೊಸಕೋಟೆ: ರಾಜರ ಕಾಲದ ಚಿನ್ನದ ಸರ ಎಂದು ಜನರನ್ನು ಮರುಳು ಮಾಡಿ, ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 63 ಲಕ್ಷ ನಗದು, ಸುಮಾರು 8 ಕೆ.ಜಿ ನಕಲಿ ಚಿನ್ನ, ಕೃತ್ಯಕ್ಕೆ ಬಳಸಿದ ಕಾರು ಮತ್ತು 2 ಲಾಂಗ್ ಮಚ್ಚುಗಳನ್ನ ಹೊಸಕೋಟೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಹೊಸಕೋಟೆ ಠಾಣಾ ವ್ಯಾಪ್ತಿಯ ಚಿಂತಾಮಣಿ ರಸ್ತೆಯ ಬಳಿ ಬಳ್ಳಾರಿ ಮೂಲದ ಸಂತೋಷ ಎಂಬ ವ್ಯಕ್ತಿಗೆ ಅಸಲಿ ಚಿನ್ನ ಕೊಡುತ್ತೇವೆ ಅಂತ ಹೇಳಿದ ಆರೋಪಿಗಳು, ನಕಲಿ ಚಿನ್ನ ಕೊಟ್ಟು 15 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಹೊಸಕೋಟೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಿ.ರಾಜೇಶ್ (27), ಎಸ್.ಬನ್ನಿ (21), ಸಿ. ಸಂಪತ್ (35), ಎಸ್.ಕಲ್ಯಾಣ್ (25), ಬಾಯಕೊಂಡ ಅಲಿಯಾಸ್ ಪ್ರೇಮಕುಮಾರ್ (23) ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಬಳಿಯಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳು.
Laxmi News 24×7