ಶಿರಸಿ/ಬಳ್ಳಾರಿ: ರಜೆ ಇದೆ ಎಂದು ಜಲಪಾತಕ್ಕೆ ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಇನ್ನೋರ್ವ ವಿದ್ಯಾರ್ಥಿ ಅದೃಷ್ಟವಶಾತ್ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಣ್ಣೆ ಹೊಳೆ ಜಲಪಾತದಲ್ಲಿ ನಡೆದಿದೆ.
ಶಿರಸಿಯ ಅರಣ್ಯ ಮಹಾವಿದ್ಯಾಲಯದ ಮೂರನೇ ವರ್ಷದ ನಾಲ್ವರು ಪದವಿ ವಿದ್ಯಾರ್ಥಿಗಳು ಭಾನುವಾರ ರಜೆಯಿರುವ ಕಾರಣ ಜಲತಾಪಕ್ಕೆ ತೆರಳಿದ್ದರು. ಎಚ್ಚರಿಕೆಯ ನಾಮಫಲಕ ಆರಂಭದಲ್ಲೇ ಇದ್ದರೂ ಅದನ್ನು ನಿರ್ಲಕ್ಷಿಸಿ ಜಲಪಾತಕ್ಕೆ ತೆರಳಿದ್ದಾರೆ. ಇವರಲ್ಲಿ ಕಾಲು ತೊಳೆಯಲು ಓರ್ವ ವಿದ್ಯಾರ್ಥಿ ನೀರಿಗೆ ಇಳಿದಾಗ ಘಟನೆ ಸಂಭವಿಸಿದೆ.
ಹೊಸಪೇಟೆ ತಾಲೂಕಿನ ಶ್ರೀನಿವಾಸ ಎಂಬ ವಿದ್ಯಾರ್ಥಿ ಮೊದಲಿಗೆ ಕಾಲು ತೊಳೆಯಲು ಹೋಗಿ ಜಲಪತಾಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಮಧ್ಯದಲ್ಲಿ ಕಲ್ಲು ಹಿಡಿದುಕೊಂಡು ಬದುಕಿದ್ದಾರೆ. ಆದರೆ ಕಾಲಿಗೆ ಗಾಯವಾಗಿದ್ದರಿಂದ ಸ್ಟ್ರೇಚ್ಚರ್ ಮೂಲಕ ಕರೆದೊಯ್ಯಲಾಗಿದೆ. ಇನ್ನೋರ್ವ ಹೂವಿನ ಹಡಗಲಿಯ ರಾಹುಲ್ ಕೊಚ್ಚಿ ಹೋಗುತ್ತಿದ್ದ ಗೆಳೆಯನನ್ನು ಕೈ ಹಿಡಿಯಲು ಹೋಗಿ ಜಲಪಾತಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ. ಇನ್ನು ವಿದ್ಯಾರ್ಥಿಗಳಾದ ದರ್ಶನ್ ಹಾಗೂ ಭೀಮಪ್ಪ ಸುರಕ್ಷಿತವಾಗಿದ್ದು, ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಮುಳುಗು ತಜ್ಞ ಗೋಪಾಲ ಗೌಡ ತಂಡದಿಂದ ಕಾರ್ಯಾಚರಣೆ ನಡೆದಿದ್ದು, ಶ್ರೀನಿವಾಸನನ್ನು ಕರೆದುಕೊಂಡು ಹೋಗಲು ಸಹಕರಿಸಿದ್ದಾರೆ. ಅಗ್ನಿ ಶಾಮಕ ವಾಹನ ಬಂದರೂ ಸಹ ಒಳಗಡೆ ಹೋಗಲು ದಾರಿಯಿಲ್ಲದ ಕಾರಣ ಹಿಂತಿರುಗಿದೆ. ಗ್ರಾಮೀಣ ಠಾಣೆಯ ಪಿಎಸ್ಐ ಅಶೋಕ ರಾಥೋಡ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆ ಮುಂದುವರೆಸಲಾಗಿದೆ.
ಸಂಡೂರಲ್ಲಿ ಕೊಚ್ಚಿ ಹೋದ ಬೈಕ್ ಸವಾರ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಿಂದ ಗಾದಿಗನೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಬಿದ್ದು ಬೈಕ್ ಸವಾರನೊಬ್ಬ ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ವಡ್ಡು ಗ್ರಾಮದ ನಿವಾಸಿ ಯುವರಾಜ (22) ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ.
Laxmi News 24×7