ಕಳಪೆ ಬೀಜ, ರಸಗೊಬ್ಬರ ಕೊರತೆ ನಡುವೆ ಸೋಯಾಬಿನ್ ಬೆಳೆಗೆ ಕೀಟಬಾಧೆ
ಕೃಷಿ ಅಧಿಕಾರಿ ಎದುರು ಅಳಲು ತೊಡಿಕೊಂಡ ರೈತ; ಬೆಳೆ ಹಾನಿಗೆ ಪರಿಹಾರದ ಭರವಸೆ
ಒಟ್ಟು 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ ಬೆಳೆದ ರೈತ
ಬೆಳಗಾವಿ ತಾಲೂಕಿನಲ್ಲಿ ವ್ಯಾಪಕವಾದ ಸಮಸ್ಯೆ
ಕೃಷಿ ಅಧಿಕಾರಿ ಎದುರು ಅಳಲು ತೊಡಿಕೊಂಡ ರೈತರು
ಬೆಳೆ ಹಾನಿಗೆ ಪರಿಹಾರದ ಭರವಸೆ ನೀಡಿದ ಅಧಿಕಾರಿಗಳು
ಬೆಳಗಾವಿ ಜಿಲ್ಲೆಯಲ್ಲಿ ಕಳಪೆ ಬೀಜ ಮತ್ತು ರಸಗೊಬ್ಬರ ಕೊರತೆಯ ನಡುವೆಯೇ ರೈತರು ಬೆಳೆದ ಸೋಯಾಬಿನ್ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಬೈಲಹೊಂಗಲ, ಸವದತ್ತಿ ಮತ್ತು ಬೆಳಗಾವಿ ತಾಲೂಕಿನಲ್ಲಿ ಈ ಸಮಸ್ಯೆ ವ್ಯಾಪಕವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆಯಲಾಗಿದ್ದು,
ಕೀಟಬಾಧೆಯಿಂದಾಗಿ ಗಣನೀಯ ಪ್ರಮಾಣದ ಬೆಳೆ ನಾಶವಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿರುವುದನ್ನು ಕಂಡು ಕೃಷಿ ಇಲಾಖೆಯ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಗೊಬ್ಬರ, ಔಷಧ ಎಲ್ಲವನ್ನೂ ಬಳಸಿ ಕಷ್ಟಪಟ್ಟು ಬೆಳೆದರೂ ಬೆಳೆ ನಾಶವಾಗಿರುವುದಕ್ಕೆ ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಸಮಸ್ಯೆಯನ್ನು ಅರಿತ ಕೃಷಿ ಜಂಟಿ ನಿರ್ದೇಶಕ ಹೆಚ್.ಡಿ. ಕೋಳೆಕರ್ ಅವರು ಬೈಲಹೊಂಗಲ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿದರು. ಅವರು ಸ್ವತಃ ಜಮೀನಿಗೆ ಇಳಿದು ಬೆಳೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಈ ವೇಳೆ, ಬೆಳೆ ಹಾನಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು. ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದು, ಬೆಳೆ ಹಾನಿ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು
.
ಈ ಕುರಿತು ಮಾತನಾಡಿರುವ ರೈತರು, “ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಆದರೆ ಕಳಪೆ ಬೀಜ ಮತ್ತು ನಂತರ ಕೀಟಬಾಧೆಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದೆ. ನಮಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.
ಕೃಷಿ ಜಂಟಿ ನಿರ್ದೇಶಕರ ಭರವಸೆಯು ರೈತರಿಗೆ ಸ್ವಲ್ಪ ಸಮಾಧಾನ ತಂದಿದ್ದರೂ, ಪರಿಹಾರ ಯಾವಾಗ ಸಿಗಲಿದೆ ಎಂಬುದರ ಕುರಿತು ಕಾತುರದಿಂದ ಕಾಯುತ್ತಿದ್ದಾರೆ. ಈ ಸಮಸ್ಯೆಯು ಜಿಲ್ಲೆಯ ಇತರ ತಾಲೂಕುಗಳಿಗೂ ವಿಸ್ತರಿಸುವ ಸಾಧ್ಯತೆಗಳಿದ್ದು, ಕೃಷಿ ಇಲಾಖೆ ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
Laxmi News 24×7