ನಾಂದನಿ ಮಠದ ಆನೆಯನ್ನ ಅಂಬಾನಿ ಒಡೆತನದ ಉದ್ಯಾನದಿಂದ ಮುಕ್ತಗೊಳಿಸಿ
ಕರ್ನಾಟಕ-ಮಹಾರಾಷ್ಟ್ರ ಜೈನ ಬಾಂಧವರಿಂದ ಭವ್ಯ ಚಳುವಳಿ; ರಾಜು ಶೆಟ್ಟಿ
ನಾಂದನಿಮಠದ ಆನೆ ಅಂಬಾನಿ ಉದ್ಯಾನಕ್ಕೆ ರವಾನೆಮರಳಿ ಮಹಾದೇವಿಯನ್ನು ಕರೆ ತರಲು ಹೋರಾಟಭಾನುವಾರ ಜೈನ ಬಾಂಧವರಿಂದ ಚಳುವಳಿ ಆರಂಭಮಾಜಿ ಸಂಸದ ರಾಜು ಶೆಟ್ಟಿ ಮಾಹಿತಿ
ಉದ್ಯಮಿ ಅಂಬಾನಿ ಒಡೆತನದಲ್ಲಿರುವ ವಣತಾರಾ ಉದ್ಯಾನವನಕ್ಕೆ ತೆಗೆದುಕೊಂಡು ಹೋದ ನಾಂದನಿ ಜೈನಮಠದ ಆನೆ ‘ಮಹಾದೇವಿ’ ಯನ್ನು ಮುಕ್ತಗೊಳಿಸಿ ಪುನಃ ಜೈನಮಠಕ್ಕೆ ಹಸ್ತಾಂತರಿಸುವಂತೆ ಆಗ್ರಹಿಸಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಜೈನ ಬಾಂಧವರು ಭಾನುವಾರ ಸಂಜೆ ನಾಂದನಿ ಜೈನಮಠದಲ್ಲಿ ಭವ್ಯವಾದ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ.
ಈ ಚಳುವಳಿಗೆ ಪಾಲ್ಗೊಳ್ಳಲು ಕರ್ನಾಟಕದ ಜೈನ ಬಾಂಧವರನ್ನು ಮಾಜಿ ಸಂಸದ ರಾಜು ಶೆಟ್ಟಿ ಆಹ್ವಾನಿಸಿದ್ದಾರೆ. ಶನಿವಾರ, ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶಾಂತಿ ಸಾಗರ್ ಜೈನ್ ಆಶ್ರಮದಲ್ಲಿ ನಡೆದ ಸಭೆಯಲ್ಲಿ ರಾಜು ಶೆಟ್ಟಿ ಅವರು ಈ ಆಹ್ವಾನ ನೀಡಿದರು. “ಕೇಂದ್ರ ಸರ್ಕಾರ ಜೈನಮಠಗಳಲ್ಲಿ ಇರುವ ಆನೆಗಳನ್ನು ಅನ್ಯಾಯವಾಗಿ ಉದ್ಯಮಿ ಅಂಬಾನಿ ಅವರಿಗೆ ಒಪ್ಪಿಸುತ್ತಿದೆ. ಜೈನಮಠಗಳಲ್ಲಿ ಈ ಆನೆಗಳನ್ನು ಅನೇಕ ವರ್ಷಗಳಿಂದ ಪರಂಪರೆಯಾಗಿ ಸಾಕಲಾಗುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳಲ್ಲಿ ಮಾತ್ರ ಬಳಸಲಾಗುತ್ತದೆ. ಆದರೆ ಈಗ ಈ ಪರಂಪರೆಯನ್ನು ಧ್ವಂಸಗೊಳಿಸಿ ನಾಂದನಿ ಜೈನಮಠದ ಮಹಾದೇವಿ ಆನೆಯನ್ನು ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ.”
ಈಗ ಶೇಡಬಾಳದ ಜೈನ್ ಆಶ್ರಮದಲ್ಲಿರುವ ಪದ್ಮ ಎಂಬ ಇನ್ನೊಂದು ಆನೆಯನ್ನು ಕೂಡ ತೆಗೆದುಕೊಂಡು ಹೋಗುವ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಪವಿದೆ. ಇದಕ್ಕೆ ಜೈನ ಸಮಾಜದ ಬಾಂಧವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ, ಮಾಜಿ ಸಂಸದ ರಾಜು ಶೆಟ್ಟಿ ಮಾತನಾಡುತ್ತಾ, “ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಹುನ್ನಾರದಿಂದ ಹೊರ ಬಂದು, ಜೈನಮಠಗಳ ಪರಂಪರೆಯನ್ನು ಕಾಪಾಡಬೇಕು,” ಎಂದು ಕರೆ ನೀಡಿದರು.
ಸಭೆಯಲ್ಲಿ ಶಿರಗುಪ್ಪಿಯ ನ್ಯಾಯವಾದಿ ಅಭಯ್ ಕುಮಾರ್ ಅಕಿವಾಟೆ, ನೇಮಿನಾಥ್ ನರಸಗೌಡರ್ ಅಶ್ವಥ್ ಪಾಟೀಲ್, ಅರುಣ್ ಗಣೇಶವಾಡಿ, ದೀಪಕ್ ಪಾಟೀಲ್ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
Laxmi News 24×7