ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ವೃದ್ದಾಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕೃಷ್ಣಮೂರ್ತಿ (81) ಹಾಗೂ ಇವರ ಪತ್ನಿ ರಾಧಾ (74) ಆತ್ಮಹತ್ಯೆಗೆ ಶರಣಾದವರು. ತಲಘಟ್ಟಪುರ ಠಾಣೆ ಪೊಲೀಸರು ಅಸ್ವಾಭಾವಿಕ ಸಾವಿನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿವರ: ಪುತ್ರ ವಿಜಯ್ ಮನೆಯಲ್ಲಿ ಮೊದಲು ವೃದ್ಧ ದಂಪತಿ ವಾಸವಿದ್ದರು. ಸೊಸೆ ಮಾಡುವ ಅಡುಗೆ ಇಷ್ಟವಿಲ್ಲ ಎಂದು ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಕುರಿತು ಮಗನ ಬಳಿ ದೂರು ನೀಡುತ್ತಿದ್ದರು.
ಕ್ರಮೇಣ ಸೊಸೆಯೊಂದಿಗೆ ಹೊಂದಾಣಿಕೆಯಾಗದೆ ತಮಗೆ ಬೇರೆ ಮನೆ ಮಾಡಿ ಕೊಡುವಂತೆ ಒತ್ತಾಯಿಸುತ್ತಿದ್ದರು. ಪುತ್ರ ವಿಜಯ್ ತಮ್ಮ ಪೋಷಕರನ್ನು 2021ರಲ್ಲಿ ಬ್ಯಾಟರಾಯನಪುರ ಸಾಯಿ ಸಮೃದ್ಧಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. 2023ರಲ್ಲಿ ಪೋಷಕರನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮತ್ತೆ ಮನೆಯಲ್ಲಿ ಹೊಂದಾಣಿಕೆಯಾಗಲಿಲ್ಲ. ಹೀಗಾಗಿ, ಏಪ್ರಿಲ್ನಲ್ಲಿ ಅಂಜನಾನಗರದಲ್ಲಿರುವ ಕಮಲಮ್ಮ ರಾಮಕೃಷ್ಣಪ್ಪ ವೃದ್ದಾಶ್ರಮಕ್ಕೆ ಸೇರಿಸಲಾಗಿತ್ತು.
ಜೂನ್ 23ರಂದು ಆಶ್ರಮದಲ್ಲಿ ಟಿ.ವಿ ನೋಡುವ ವಿಚಾರಕ್ಕೆ ದಂಪತಿಯ ನಡುವೆ ಮನಸ್ತಾಪವಾಗಿದೆ. ಕೆಲ ಸಮಯದ ಬಳಿಕ ಇಬ್ಬರೂ ಒಟ್ಟಿಗೆ ಊಟ ಮಾಡಿ ಕೊಠಡಿಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಬಂದು ನೋಡಿದಾಗ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪುತ್ರ ನೀಡಿದ ದೂರು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7