ಬೆಂಗಳೂರು: ರಾಜ್ಯದ ಎಲ್ಲಾ ವರ್ಗಗಳ ವಾಹನಗಳಿಗೆ ಹೆಚ್ಎಸ್ಆರ್ಪಿ (ಅತಿಸುರಕ್ಷಿತ ನೋಂದಣಿ ಫಲಕ) ಅಳವಡಿಕೆ ಕಾಲಮಿತಿಯನ್ನು ಸಾರಿಗೆ ಇಲಾಖೆ ಮತ್ತೊಮ್ಮೆ ವಿಸ್ತರಿಸಿದೆ.
ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಕೆ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಸಾರಿಗೆ ಇಲಾಖೆ 7ನೇ ಬಾರಿಗೆ ಕಾಲಮಿತಿ ವಿಸ್ತರಣೆ ಮಾಡಿದೆ. ಏಪ್ರಿಲ್ 1, 2019ರ ಮುನ್ನ ನೋಂದಣಿಯಾದ ವಾಹನಗಳು ಕಡ್ಡಾಯವಾಗಿ ಹೆಚ್ಎಸ್ಆರ್ಪಿ ಅಳವಡಿಕೆ ಮಾಡಬೇಕು.
ಈ ಮುಂಚೆ ಜನವರಿ 31ರವರೆಗೆ ಕಾಲ ಮಿತಿಯನ್ನು ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಕಾಲಮಿತಿಯನ್ನು ಮಾರ್ಚ್ 31, 2025ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಹೆಚ್ಎಸ್ಆರ್ಪಿ ಸುರಕ್ಷಿತ ನಂಬರ್ ಪ್ಲೇಟ್ ಆಗಿದ್ದು, ದುರ್ಬಳಕೆ ತಪ್ಪಿಸಲು ವಿನ್ಯಾಸಗೊಳಿಸಲಾಗಿದೆ. ಹೆಚ್ಎಸ್ಆರ್ಪಿ ವಿಶಿಷ್ಟ 10 ಅಂಕಿಯ ನಂಬರ್ ಆಗಿದ್ದು, ವಾಹನದ ಚಾರ್ಸಿ ಹಾಗೂ ಇಂಜಿನ್ ವಿವರಕ್ಕೆ ಜೋಡಣೆಯಾಗಿದೆ.ಹೆಚ್ಎಸ್ಆರ್ಪಿ ಅಳವಡಿಕೆ ಡೆಡ್ಲೈನ್ ಅನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿದೆ. 2023ರಂದು ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್ಎಸ್ಆರ್ಪಿ ಫಲಕ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ರಾಜ್ಯ ಸಾರಿಗೆ ಇಲಾಖೆ ಈವರೆಗೆ ಈ ನಂಬರ್ ಪ್ಲೇಟ್ ಅಳವಡಿಕೆಗೆ 6 ಬಾರಿ ಡೆಡ್ಲೈನ್ ವಿಸ್ತರಿಸಲಾಗಿದೆ. ಆದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಹೀಗಾಗಿ, ರಾಜ್ಯ ಸಾರಿಗೆ ಇಲಾಖೆ ಈಗ ಮತ್ತೊಂದು ಅವಕಾಶ ನೀಡಿದೆ.
Laxmi News 24×7