ಬಾಗಲಕೋಟೆ: ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರು ಲೋಕಸಭಾ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿದರೆ ಸರಿ, ಇಲ್ಲದಿದ್ದರೆ ಪಕ್ಷೇತರಾಗಿ ಸ್ಪರ್ಧಿಸಿರಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಮುಖಂಡರು, ಕಾರ್ಯಕರ್ತರು ಶುಕ್ರವಾರ ಚರಂತಿಮಠದಲ್ಲಿ ನಡೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅಭಿಮಾನಿಗಳ ಬಳಗದಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಆಗ್ರಹಿಸಿದರು.
‘ಬೇಕೇ, ಬೇಕೇ ಬೇಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ ಬೆಂಬಲಿಗರು, ಐದು ವರ್ಷಗಳ ಕಾಲ ಕ್ಷೇತ್ರದಾದ್ಯಂತ ಸಂಚರಿಸಿ ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅಭ್ಯರ್ಥಿ ಬದಲಾಯಿಸಿ ವೀಣಾ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಬಾಗಲಕೋಟೆ ಜಿಲ್ಲೆ ಟಿಕೆಟ್ನಿಂದ ವಂಚಿತವಾಗಿದೆ. ವೀಕ್ಷಕರು ಬಂದಾಗ ಸಂಯುಕ್ತಾ ಪಾಟೀಲ ಇದ್ದರಾ? ಇಲ್ಲದವರಿಗೆ ನೀಡುವುದಾದರೆ, ಅಭಿಪ್ರಾಯ ಕೇಳುವ ಅವಶ್ಯಕತೆ ಏನಿತ್ತು. ಜಿಲ್ಲೆಯ ಅಸ್ಮಿತೆ ಪರಿಗಣಿಸಿ, ವೀಣಾ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಬಲರಾಮ ನಾಯಕ ಮಾತನಾಡಿ, ‘ವಿಜಯಪುರಕ್ಕೆ ನಾನು ಟಿಕೆಟ್ ಕೇಳಿದಾಗ ಇದೇ ಸಚಿವ ಶಿವಾನಂದ ಪಾಟೀಲ ಬಾಗಲಕೋಟೆ ಜಿಲ್ಲಯವರಾಗಿ ಇಲ್ಲೇಕೆ ಟಿಕೆಟ್ ಕೇಳುತ್ತೀರಿ ಎಂದು ಬೈದು ಕಳುಹಿಸಿದ್ದರು. ಈಗ ಅವರ ಮಗಳಿಗೇಕೆ ಇಲ್ಲಿ ಎಂದು ಪ್ರಶ್ನಿಸಿದರು. ಶಾಸಕರು ಅಡ್ಜ್ಸ್ಟ್ಮೆಂಟ್ ಆಗಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ತಪ್ಪಾಗಿದೆ ಎಂದು ಹೇಳಲಿಕ್ಕೆ ಶಾಸಕರಿಗೆ ಏನಾಗಿದೆ ಎಂದರು.