ರಾಮನಗರ, ಫೆಬ್ರವರಿ 19: 40 ವಕೀಲರ(lawyers)ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಐಜೂರು ಸರ್ಕಲ್ ಬಳಿ ಸುಮಾರು 300ಕ್ಕೂ ಹೆಚ್ಚು ವಕೀಲರಿಂದ ಪ್ರತಿಭಟನಾ ರ್ಯಾಲಿ ಮಾಡಲಾಗಿದೆ. ಪಿಎಸ್ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿವರೆಗೆ ವಕೀಲರ ಮೆರವಣಿಗೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಕೀಲರ ಪ್ರತಿಭಟನೆ ಮಾಡಿದ್ದು, ಡಿಸಿ ಊಟಕ್ಕೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಾವು ಹಸಿದುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಅದ್ಹೇಗೆ ಅವರು ಊಟ ಮಾಡುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಡಿಸಿ ಮತ್ತು ಎಸ್ಪಿ ಊಟ ಬಿಟ್ಟು ಹೊರ ಬಂದಿದ್ದಾರೆ. ವಕೀಲರ ಮನವಿ ಸ್ವಿಕರಿಸಲು ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಎಸ್ಪಿ ಕಾರ್ತಿಕ್ ರೆಡ್ಡಿ ಊಟ ಬಿಟ್ಟು ಬಂದಿದ್ದಾರೆ.
ಜಿಲ್ಲಾಧಿಕಾರಿಗೆ 2 ಗಂಟೆಗಳ ಡೆಡ್ಲೈನ್ ನೀಡಿದ ವಕೀಲರು
ಈ ವೇಳೆ ಮಾತನಾಡಿದ ಡಿಸಿಜಿಲ್ಲಾಧಿಕಾರಿ ಡಾ.ಅವಿನಾಶ್ ತಪ್ಪು ಮಾಡಿದರೆ ತನಿಖೆ ಮಾಡಿ ಕ್ರಮ ತಗೊಳ್ಳುತ್ತೇವೆ. ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗೆ 2 ಗಂಟೆಗಳ ಡೆಡ್ಲೈನ್ ನೀಡಿದ ವಕೀಲರು, 2 ಗಂಟೆಯೊಳಗೆ ಒಂದು ನಿರ್ಧಾರಕ್ಕೆ ಬಂದು ಪಿಎಸ್ಐ ಸಸ್ಪೆಂಡ್ ಮಾಡುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಗೃಹ ಸಚಿವರೂ ಸ್ಥಳಕ್ಕೆ ಬರಬೇಕು ಎಂದು ವಕೀಲರು ಪಟ್ಟುಹಿಡಿದ್ದಾರೆ. 5 ಗಂಟೆಯವರೆಗೆ ಇನ್ವೆಸ್ಟಿಗೇಷನ್ ಮಾಹಿತಿ ಪಡೆದುಕೊಳ್ಳುತ್ತೇನೆ. ಬಳಿಕ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಡಿಸಿ ಡಾ.ಅವಿನಾಶ್ ಹೇಳಿದ್ದಾರೆ.
ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಿಷ್ಟು
ಎಸ್ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕಳೆದ ವಾರ ಬಾರ್ ಕೌನ್ಸಿಲ್ ಹಾಗೂ ಪದಾಧಿಕಾರಿ ಅರ್ಜಿ ಕೊಟ್ಟಿದ್ದಾರೆ. ಅದನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಕೀಲರು ಕೊಟ್ಟ ಅರ್ಜಿಯನ್ನು ತನಿಖೆ ಮಾಡಲಾಗುತ್ತಿದೆ.