ಹುಕ್ಕೇರಿ: ಧರ್ಮಸ್ಥಳ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮ ಅರಿತುಕೊಂಡು ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಅಭಿಮತ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಂಕೇಶ್ವರದಲ್ಲಿ ಶನಿವಾರ ಹಮ್ಮಿಕೊಂಡ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಟಿ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.
ಯೋಜನೆಯ ಪರಿಣಾಮ ಮತ್ತು ಅನುಷ್ಠಾನ ಕುರಿತು ಮಾಹಿತಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ, ಸ್ವ ಉದ್ಯೋಗಗಳಿಗೆ ಪೂರಕವಾಗಿ ಯೋಜನೆಯಲ್ಲಿ ಇರುವಂತಹ ತರಬೇತಿ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ‘ದುಶ್ಚಟ ಮುಕ್ತ ಸಮಾಜದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಸಿದರು.
ಕುಟುಂಬದಲ್ಲಿ ದುಶ್ಚಟಕ್ಕೆ ಒಳಗಾದ ಸದಸ್ಯರಿಂದ ದುಶ್ಚಟ ನಿರ್ಮೂಲನೆ ಮಾಡುವುದು ಹೇಗೆ, ಕುಟುಂಬದಲ್ಲಿ ಮಹಿಳೆಯ ಪಾತ್ರ, ಕುಟುಂಬದ ಅಭಿವೃದ್ಧಿಗೆ ಮಹಿಳೆಯರ ಪರಿಶ್ರಮ, ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು.
ಸಂಕೇಶ್ವರ ಪಿಎಸ್ಐ ನರಸಿಂಹರಾಜು ಜೆ.ಡಿ.ಸಮಾರಂಭ ಉದ್ಘಾಟಿಸಿ, ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳಲ್ಲಿ ಮಹಿಳೆಯರು ಸೇರಿ ಶಿಸ್ತು, ವ್ಯವಹಾರ ಜ್ಞಾನ ಹೊಂದಿದ್ದಾರೆ. ಯೋಜನೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವ ಕೊಟ್ಟಿದ್ದು, ಮಹಿಳಾ ಸಬಲೀಕರಣಕ್ಕೆ ಉತ್ತಮವಾದ ಕಾರ್ಯಕ್ರಮ ಎಂದರು.
ಜನಜಾಗೃತಿ ವೇದಿಕೆ ಸದಸ್ಯೆ ಶೋಭಾ ಹಿರೇಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠ್ಠಲ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಪುರಸಭೆ ಅಧ್ಯಕ್ಷೆ ಸೀಮಾ ಹತನೂರೆ ಅಧ್ಯಕ್ಷತೆ ವಹಿಸಿದ್ದರು.
ಸತ್ಕಾರ: ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಲಾಯಿತು.
ತಾಲ್ಲೂಕಿನ ಜ್ಞಾನವಿಕಾಸ ಸೇವಾ ಪ್ರತಿನಿಧಿಗಳು, ಕೇಂದ್ರದ ನೂರಾರು ಸದಸ್ಯರು, ಸಾರ್ವಜನಿಕರು ಇದ್ದರು. ಯೋಜನಾಧಿಕಾರಿ ವಿನಾಯಕ ಕಾಕಂಬಿ ಸ್ವಾಗತಿಸಿದರು. ಸಮನ್ವಯಾಧಿಕಾರಿ ಲಕ್ಷ್ಮೀ ಕಮಡೊಳ್ಳಿ ನಿರೂಪಿಸಿದರು. ಶ್ಯಾಮವೇಳಪ್ಪ ವಂದಿಸಿದರು.
Laxmi News 24×7