Breaking News

ತವರಿನಲ್ಲಿ ವಿಶ್ವಕಪ್​ ಕೈಚೆಲ್ಲಿದ ಭಾರತ: 6ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಆಸೀಸ್​

Spread the love

ಅಹಮದಾಬಾದ್​ (ಗುಜರಾತ್​): ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್​ ಗೆದ್ದುಕೊಂಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ 7 ಓವರ್​ ಉಳಿಸಿಕೊಂಡು 6 ವಿಕೆಟ್​ನಿಂದ ಗೆದ್ದಿದೆ. 2003ರಲ್ಲಿ ಕಾಂಗರೂ ಪಡೆ​ ವಿರುದ್ಧ ಸೋಲು ಕಂಡಿದ್ದ ಭಾರತ, ಇದೀಗ 20 ವರ್ಷದ ನಂತರವೂ ವಿಶ್ವಕಪ್ ಫೈನಲ್​ನಲ್ಲಿ ಸೋಲು ಕಂಡಿದೆ.

2003ರ ವಿಶ್ವಕಪ್​​ನಲ್ಲಿ ರಿಕಿ ಪಾಂಟಿಂಗ್​ 140 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾದರೆ, 2023ರ ವಿಶ್ವಕಪ್​ನಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಮುಳುವಾದರು. ಚೊಚ್ಚಲ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮತ್ತೆಂದೂ ಫೈನಲ್​ ಹಂತಕ್ಕೆ ಬಂದು ಎಡವಿಲ್ಲ. 1975ರ ನಂತರ 6 ಬಾರಿ ಫೈನಲ್​ ಪ್ರವೇಶಿಸಿರುವ ಕಾಂಗರೂ ಪಡೆ ಪ್ರತಿ ಬಾರಿಯೂ ಚಾಂಪಿಯನ್​ ಆಗಿದೆ.

 

 

ವಿಶ್ವಕಪ್​ನ ಲೀಗ್​ ಮತ್ತು ಸೆಮೀಸ್​ ಸೇರಿ 10 ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿದ್ದ ಭಾರತ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ತಂಡ ವಿರಾಟ್​ ಕೊಹ್ಲಿ (54), ಕೆ ಎಲ್​ ರಾಹುಲ್​ (66) ಅರ್ಧಶತಕ ಮತ್ತು ನಾಯಕ ರೋಹಿತ್​ ಶರ್ಮಾ ಅವರ 47 ರನ್​ಗಳ ಕೊಡುಗೆಯಿಂದ 50 ಓವರ್​ ಅಂತ್ಯಕ್ಕೆ ಎಲ್ಲಾ ವಿಕೆಟ್​ ಕಳೆದುಕೊಂಡು 240 ರನ್​ ಕಲೆಹಾಕಿತ್ತು.

241 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಭಾರತದ ಬೌಲರ್​ಗಳು ಬಿಗಿ ದಾಳಿ ಮೂಲಕ ಕಾಡಿದರು. ಇದರಿಂದ ಮೂರು ವಿಕೆಟ್ ಆಸ್ಟ್ರೇಲಿಯಾ ಕಳೆದುಕೊಂಡಿತ್ತು. ಆದರೆ, ನಂತರ ನಾಲ್ಕನೇ ವಿಕೆಟ್​ಗೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ 192 ರನ್​ ಪಾಲುದಾರಿಕೆ ಮೂಲಕ ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡರಲ್ಲದೆ, ಆಸೀಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಂತೆ ಮಾಡಿದರು.

ಆಸೀಸ್​ಗೆ ಆರಂಭಿಕ ಆಘಾತ: ಎರಡನೇ ಓವರ್​ನಲ್ಲಿ ಮೊಹಮ್ಮದ್​ ಶಮಿ ಡೇವಿಡ್​ ವಾರ್ನರ್​ (7) ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಮಿಚೆಲ್ ಮಾರ್ಷ್ (15) ಮತ್ತು ಸ್ಟೀವನ್ ಸ್ಮಿತ್ (4) ವಿಕೆಟ್​ ಉರುಳಿತು. ಶಮಿ 1 ವಿಕೆಟ್​ ಪಡೆದರೆ, ಬುಮ್ರಾ 2 ವಿಕೆಟ್​ ಕಬಳಿಸಿದರು. ಆದರೆ ನಂತರ ಭಾರತದ ಯಾವುದೇ ಬೌಲರ್ ಕೂಡ​ ವಿಕೆಟ್​ ಪಡೆಯಲಿಲ್ಲ.

ಹೆಡ್, ಲಬುಶೇನ್ ಜೊತೆಯಾಟ: 47ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ 192 ರನ್​ಗಳ ಪಾಲುದಾರಿಕೆಯನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಮಾಡಿದರು. ಈ ಜೊತೆಯಾಟ ಮುರಿಯುವಲ್ಲಿ ಟೀಮ್​ ಇಂಡಿಯಾದ ಬೌಲರ್​ಗಳು ವಿಫಲರಾದರು.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ ಪಾಲ್ಗೊಂಡ ಕ್ಷಣಗಳು.

Spread the love ಬೆಂಗಳೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಮ್ಮಟದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ