ರಾಯಚೂರು: ಅಂಫಾನಾ ಚಂಡಮಾರುತದ ಹಿನ್ನೆಲೆ, ರಾಜ್ಯದಲ್ಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಪರಿಣಾಮ ಪ್ರಸ್ತುತ ವಿದ್ಯುತ್ ಬೇಡಿಕೆ ಇಳಿಕೆಯಾಗಿದೆ. ಇದರೊಂದಿಗೆ ಪವನ ಹಾಗು ಸೌರಶಕ್ತಿ ಉತ್ಪಾದನೆ ಅಧಿಕವಾಗಿದ್ದು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಬೇಸಿಗೆಯಲ್ಲಿಯೇ ರೆಸ್ಟ್ ನೀಡಲಾಗಿದೆ.
ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಅನ್ನು ರಾಯಚೂರು ಮೂಲದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ನೀಡಲಾಗುತ್ತಿದೆ. 40 ವರ್ಷಗಳ ಇತಿಹಾಸದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಬಹುತೇಕವಾಗಿ ಶಾಖೋತ್ಪನ್ನ ಸ್ಥಾವರಗಳೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದವು. ಆದರೆ, ಈ ಬಾರಿ ಬೇಸಿಗೆಯ ನಡುವೆಯೇ ಶಾಖೋತ್ಪನ್ನ ಸ್ಥಾವರಗಳಿಂದ ವಿದ್ಯುತ್ ಬೇಡಿಕೆ ಇಳಿಕೆಯಾಗಿದೆ. ರಾಜ್ಯದಲ್ಲಿ ಈಗ 9234 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು ರಾಯಚೂರು, ಯರಮರಸ್ ಹಾಗು ಬಳ್ಳಾರಿ ಶಾಖೋತ್ಪನ್ನ ಸ್ಥಾವರಗಳಿಂದ ಈಗ ಕೇವಲ 647 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.
ಆರ್ಟಿಪಿಎಸ್ ನ 8 ಘಟಕಗಳ ಪೈಕಿ 2 ಘಟಕಗಳು ಮಾತ್ರ ಉತ್ಪಾದನೆ ಮಾಡಲಾಗುತ್ತಿದ್ದು ಒಟ್ಟು 1710 ಮೆಗಾವ್ಯಾಟ್ ಸಾಮಾರ್ಥ್ಯ ದ ಆರ್ಟಿಪಿಎಸ್ ನಲ್ಲಿ ಈಗ 369 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 2 ಘಟಕಗಳನ್ನು ಹೊಂದಿರುವ ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲಿ ಒಟ್ಟು 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಗೆ ಈಗ ಒಂದು ಘಟಕದಿಂದ 268 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಯರಮರಸ್ ಶಾಖೋತ್ಪನ್ನ ಎರಡೂ ಘಟಕಗಳನ್ನು ಬಂದ್ ಮಾಡಲಾಗಿದೆ, ಈ ಪವನ, ಸೌರ ಹಾಗೂ ಜಲಶಕ್ತಿಯಿಂದ ವಿದ್ಯುತ್ ಉತ್ಪಾದನೆ ಅಧಿಕವಾಗಿರುವದರಿಂದ ಈಗ ಶಾಖೋತ್ಪನ್ನ ಸ್ಥಾವರಗಳ ವಿದ್ಯುತ್ ಬೇಡಿಕೆ ತಗ್ಗಿದೆ.
ಕೆಲಸ ಕಳೆದುಕೊಂಡಿರುವ ಕಾರ್ಮಿಕರು:
ಕೊರೊನಾ ಭೀತಿಯ ಮಧ್ಯೆಯೂ ಶಾಖೋತ್ಪನ್ನ ಸ್ಥಾವರದಲ್ಲಿ ದುಡಿಯುತ್ತಿದ್ದ 70 ಜನ ಗುತ್ತಿಗೆ ಕಾರ್ಮಿಕರು ಈಗ ಕೆಲಸ ಕಳೆದುಕೊಂಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ರಾಯಚೂರು ಶಾಖೋತ್ಪನ್ನ ಸ್ಥಾವರದಲ್ಲಿ ಗುತ್ತಿಗೆ ಕಾರ್ಮಿಕರಾಗಿ 70 ಜನ ಕಾರ್ಮಿಕರಿದ್ದರು, ಪ್ರತಿವರ್ಷ ಅವರ ಗುತ್ತಿಗೆ ನವೀಕರಣವಾಗುತ್ತಿತ್ತು, ಆದರೆ ಈ ವರ್ಷ ಅವರ ಗುತ್ತಿಗೆ ನವೀಕರಣ ಮಾಡದೆ ಕೆಲಸಕ್ಕೆ ಬಾರದಂತೆ ಹೇಳಿದ್ದಾರೆ.
ಶಾಖೋತ್ಪನ್ನ ಸ್ಥಾವರದಲ್ಲಿ ವಿವಿಧ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಅವರ ಉದ್ಯೋಗ ಕಳೆದುಕೊಂಡಿದ್ದು 70 ಕುಟುಂಬಗಳು ಬೀದಿಗೆ ಬಿದ್ದಿವೆ. ಶಾಖೋತ್ಪನ್ನ ಸ್ಥಾವರದಲ್ಲಿ ಉತ್ಪಾದನೆ ಕಡಿತವಾಗಿರುವ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಹೀಗಾಗಿ ಕಾರ್ಮಿಕರಿಗೆ ಪ್ರಸ್ತುತ ಬೇರೆ ಕಡೆ ಕೆಲಸವೂ ಸಿಗುತ್ತಿಲ್ಲ, ಇಲ್ಲಿಯೂ ಕೆಲಸವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ ನಮ್ಮನ್ನು ಮತ್ತೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮುಂದುವರಿಸಿ ಎಂದು ಕಾರ್ಮಿಕರು ನಿತ್ಯ ಆರ್ ಟಿಪಿಎಸ್ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಆರ್ ಟಿಪಿಎಸ್ ಆಡಳಿತ ಮಂಡಳಿ( ಕೆಪಿಸಿ) ಏನು ಕ್ರಮ ಕೈಗೊಳ್ಳುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.