ಗದಗ: ”2018ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್ಗೆ ಸೋಲಾಗಲಿಲ್ಲ. ಕೆಲವರು ಬೇಕಂತಲೇ ಈ ರೀತಿ ಉಯಿಲು ಎಬ್ಬಿಸಿದರು. ನಾವು ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಶಿಫಾರಸ್ಸು ಮಾಡಲು ಸಿಎಂಗೆ ಮನವಿ ಮಾಡ್ತೇವೆ” ಎಂದು ಗದಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಸಿದ್ದರಾಮಯ್ಯನವರು ಬದ್ಧತೆಗೆ ಹೆಸರಾಗಿರುವಂತವರು. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಅನ್ನೋದನ್ನು ಮನಗಂಡಿದ್ದರು. ಹೀಗಾಗಿ ನಾಗಮೋಹನ್ ದಾಸ್ ಅವರ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ನಂತರ ಕೆಲವು ವ್ಯಕ್ತಿಗಳು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಇದರಿಂದಲೇ ಹಿನ್ನಡೆಯಾಯ್ತು ಅಂತ ಉಯಿಲನ್ನು ಎಬ್ಬಿಸಿದರು. ಆದ್ರೆ, ವಾಸ್ತವವಾಗಿ ಲಿಂಗಾಯತ ಧರ್ಮದ ಶಿಫಾರಸ್ಸು ಮಾಡಿದ್ದಕ್ಕೆ ಹಿನ್ನಡೆಯಾಗಿಲ್ಲ.
ಆದ್ರೆ, ಯಾವುದೇ ಒಂದು ಆಡಳಿತರೂಢ ಸರ್ಕಾರದ ಪಕ್ಷದ ಬಗ್ಗೆ ವಿರೋಧಿ ಅಲೆ ಇರುತ್ತೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರು. ಆದ್ರೆ, ಅದೇ ಮಾತನ್ನು ಈಗ ಬಿಜೆಪಿ ಸರ್ಕಾರ ಲಿಂಗಾಯತ ಸ್ವಧರ್ಮಕ್ಕೆ ಮಾನ್ಯತೆ ನೀಡಲಿಲ್ಲ. ಆ ಕಾರಣಕ್ಕೆ ಹಿನ್ನಡೆ ಆಯಿತು ಅಂತ ಹೇಳೋದು ತಪ್ಪಾಗುತ್ತೆ. ಒಂದೊಂದು ಸಂದರ್ಭದಲ್ಲಿ ಒಂದೊಂದು ವಿಷಯ ಚರ್ಚೆಯಲ್ಲಿ ಇರುತ್ತವೆ” ಎಂದು ತಿಳಿಸಿದರು.
”ಆಡಳಿತ ವಿರೋಧಿ ಅಲೆಯಿಂದಲೇ ಸೋಲಾಯ್ತು ಅನ್ನೋದರ ಬಗ್ಗೆ ಸಿದ್ಧರಾಮಯ್ಯನವರಿಗೆ ಗೊತ್ತಿತ್ತು ಲಿಂಗಾಯತ ಧರ್ಮದ ಶಿಫಾರಸ್ಸು ಹಿನ್ನೆಲೆಯಲ್ಲಿ ನಮಗೆ ಸೋಲಾಯ್ತು ಅಂತ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಮತ್ತೆ ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಳ್ಳಲಿದ್ದೇವೆ” ಎಂದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.