ಬೆಂಗಳೂರು: ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಮುಕ್ತಾಯವಾಗಿದೆ.
ಈ ವೇಳೆ ಶಾಸಕರು ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳ ಕ್ಷೇತ್ರವಾರು ಸಮಸ್ಯೆ, ಅನುದಾನ, ಅಭಿವೃದ್ಧಿ ಸಂಬಂಧ ಸಭೆ ನಡೆಯಿತು. ಮೊದಲಿಗೆ ತುಮಕೂರು ಜಿಲ್ಲೆಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದರು.
ಸಭೆಯ ಬಳಿಕ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ”ಇದು ವಿನೂತನ ಪ್ರಯತ್ನ. ನಮ್ಮ ನಮ್ಮ ತಾಲ್ಲೂಕುಗಳ ಸಮಸ್ಯೆ, ಅನುದಾನ, ಚುನಾವಣಾ ಭರವಸೆಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಸಿಎಂ ಗಮನಕ್ಕೆ ತರಲಾಯಿತು. ಫಲಪ್ರದವಾಗಿ ಸಭೆ ಮುಗಿದಿದೆ. ನನಗೆ ಸಂತೋಷವಾಗಿದೆ” ಎಂದರು. “ಸಚಿವರಿಗೆ ಅವರ ಇಲಾಖೆ ಬಗ್ಗೆ ತಿಳಿಯಲು ಸ್ವಲ್ಪ ಸಮಯ ಬೇಕು. ಸಚಿವರು ಕೂಡಾ ಸಭೆಯಲ್ಲಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ ಸಚಿವರಿಗೆ ಕೆಲವು ಸಂದೇಶ ನೀಡಿದ್ದಾರೆ. ಸಿಎಂ ಕೂಡ ಸಚಿವರಿಗೆ ಬಹಳಷ್ಟು ಸಂದೇಶ ರವಾನಿಸಿದ್ದಾರೆ. ಸಚಿವರ ಜೊತೆಗೆ ಸಮಸ್ಯೆ ದೊಡ್ಡದೇನಲ್ಲ” ಎಂದು ಹೇಳಿದರು.
ಅನುದಾನ ಕೊರತೆ ಇಲ್ಲ: ”ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ. ವಿವಿಧ ಶಾಸಕರು ಅನೇಕ ದೂರುಗಳನ್ನು ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂಬ ಆಶಾಭಾವನೆ ಇದೆ. ಅನುದಾನ ಕೊರತೆ ಇಲ್ಲ. ನಾವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಿದ್ದೇವೆ” ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಚಿವ ಚಲುವರಾಯ ಸ್ವಾಮಿ ಮೇಲಿನ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, “ಆ ಪತ್ರ ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲಿಸಬೇಕಾಗಿದೆ. ಬಳಿಕ ಕ್ರಮ ತೆಗೆದುಕೊಳ್ಳಬಹುದು” ಎಂದು ತಿಳಿಸಿದರು.
Laxmi News 24×7