ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದಾರೆ.
ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಆಗಸ್ಟ್ 1 ರಿಂದ 129 ಸದಸ್ಯರನ್ನು ಲೋಕಸಭೆಗೆ ಕಳುಹಿಸುವ ದಕ್ಷಿಣ ಭಾರತದ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿನ ಪಕ್ಷದ ಸಿದ್ಧತೆಗಳನ್ನು ಖರ್ಗೆ ಅವಲೋಕನ ಮಾಡಲಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮಲ್ಲಿಕಾರ್ಜನ ಖರ್ಗೆ ಅವರು ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಆಯಾ ರಾಜ್ಯಗಳ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆಗಸ್ಟ್ 1ರಂದು ಕೇರಳ ನಾಯಕರೊಂದಿಗೆ ಖರ್ಗೆ ಸಮಲೋಚನೆ ಮಾಡಲಿದ್ದಾರೆ. ಆಗಸ್ಟ್ 2ರಂದು ಕರ್ನಾಟಕ ಮತ್ತು ಆಗಸ್ಟ್ 3ರಂದು ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಚುನಾವಣಾ ಕಾರ್ಯತಂತ್ರದ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ತೆಲಂಗಾಣ, ಆಂಧ್ರಪ್ರದೇಶ ನಾಯಕರಿಗೂ ಆಹ್ವಾನ ನೀಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ದೊಡ್ಡ ಮಟ್ಟದ ಗೆಲುವಿನ ಮೂಲಕ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚುವಂತೆ ಮಾಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಗಮನ ಹರಿಸಲಾಗಿದೆ. ಕರ್ನಾಟಕ ಚುನಾವಣೆಯ ನಂತರ ಖರ್ಗೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಎಂದು ನೇಮಕ ಮಾಡಿದ್ದಾರೆ. ಜೊತೆಗೆ, 2024ರಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಸತ್ತಿನ ಸ್ಥಾನಗಳಲ್ಲಿ ಗೆಲುವು ಖಾತ್ರಿಪಡಿಸುವ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ವಹಿಸಿದ್ದಾರೆ.