Breaking News

ರಾಜ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಹೊರೆ: 2023-24ನೇ ಸಾಲಿನ ಸಾಲದ ಸ್ಥಿತಿಗತಿ ಹೀಗಿದೆ..

Spread the love

ಬೆಂಗಳೂರು: ಪಂಚ ಗ್ಯಾರಂಟಿಗಳ ಬೃಹತ್ ಹೊರೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಬಜೆಟ್​ಗೆ (2023-24) ಸಿದ್ಧತೆ ನಡೆಸುತ್ತಿದ್ದಾರೆ.

ತಮ್ಮ ನೇತೃತ್ವದ ನೂತನ ಸರ್ಕಾರದ ಹೊಸ ಬಜೆಟ್ ಮಂಡನೆಯ ತಯಾರಿಯಲ್ಲಿ ಅವರಿದ್ದಾರೆ.‌ ಇದು ಮುಂದಿನ 9 ತಿಂಗಳ ಅವಧಿಗೆ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ.‌ ನಿರ್ಗಮಿತ ಬಿಜೆಪಿ ಸರ್ಕಾರ 2023-24ನೇ ಸಾಲಿನ‌ ಬಜೆಟ್ ಮಂಡಿಸಿತ್ತು.

ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನಲ್ಲಿ 2023- 24ರಲ್ಲಿ ಅಂದಾಜು 77,750 ಕೋಟಿ ರೂ ಸಾಲ ಮಾಡುವುದಾಗಿ ತಿಳಿಸಿದ್ದರು.‌ ಇದೀಗ ಹೊಸ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಯೇ ದೊಡ್ಡ ಹೊರೆಯಾಗಿದೆ. ಹೊಸ ಬಜೆಟ್‌ನಲ್ಲಿ ಇವುಗಳಿಗೆ ಹಣ ಹೊಂದಿಸುವುದು ದೊಡ್ಡ ಸವಾಲು.‌ ಈ ಬಾರಿಯ ಬಜೆಟ್​ನಲ್ಲಿ ಸಿದ್ದರಾಮಯ್ಯ ಸರ್ಕಾರವು ಬೊಮ್ಮಾಯಿ ಸರ್ಕಾರ ಅಂದಾಜಿಸಿದ ಸಾಲದ ಮಿತಿಯಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಆರ್ಥಿಕ ವರ್ಷದ ಒಂಬತ್ತು ತಿಂಗಳ ಹೊಸ ಬಜೆಟ್​ನಲ್ಲಿ ಸಿದ್ದರಾಮಯ್ಯ ಹೆಚ್ಚಿನ ಸಾಲದ ಮೊರೆ ಹೋಗುವುದು ಅನುಮಾನ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.‌

ಸಾರ್ವಜನಿಕ ಸಾಲದ ಮೂಲಕ ಸುಮಾರು 643 ಕೋಟಿ ರೂ.‌ ಸಾಲವನ್ನು ಮೊದಲ ತ್ರೈಮಾಸಿಕದಲ್ಲಿ ಮಾಡಿದೆ. ಆರ್ಥಿಕ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಏಪ್ರಿಲ್ ತಿಂಗಳಲ್ಲಿ 262.40 ಕೋಟಿ ರೂ ಸಾರ್ವಜನಿಕ ಸಾಲ ಮಾಡಿದೆ. ಮೇ ತಿಂಗಳಲ್ಲಿ 180 ಕೋಟಿ ರೂ ಸಾರ್ವಜನಿಕ ಸಾಲ ಮಾಡಿದೆ. ಅದೇ ರೀತಿ ಜೂನ್ ತಿಂಗಳಲ್ಲಿ ಸುಮಾರು 200 ಕೋಟಿ ರೂ‌.‌ ಸಾಲ ಮಾಡಲಾಗಿದೆ.

ಎರಡನೇ ತ್ರೈಮಾಸಿಕದಲ್ಲಿ 20,000 ಕೋಟಿ ಸಾಲ?: ಇದೀಗ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ 20,000 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರ್​ಬಿಐಗೆ ಪೂರ್ವ ಮಾಹಿತಿ ನೀಡಿದೆ. ಆರ್​ಬಿಐಗೆ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಜುಲೈಯಿಂದ ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಅಂದಾಜು 20,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಉದ್ದೇಶಿಸಿದೆ.

ರಾಜ್ಯ ಸರ್ಕಾರ ಜುಲೈ ತಿಂಗಳಲ್ಲಿ ತಲಾ 1,000 ಕೋಟಿಯಂತೆ ಒಟ್ಟು 3,000 ಕೋಟಿ ರೂ.‌ ಸಾಲ ಎತ್ತುವಳಿ ಮಾಡಲಿದೆ.‌ ಜುಲೈ 11ರಿಂದ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ತನ್ನ ಮೊದಲ ಸಾಲದ ಕಂತನ್ನು ಎತ್ತುವಳಿ ಮಾಡಲು ನಿರ್ಧರಿಸಿದೆ. ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ. ಜು. 8 ರಿಂದ ನಾಲ್ಕು ವಾರ ತಲಾ 2,000 ಕೋಟಿ ರೂ. ನಂತೆ ಒಟ್ಟು 8,000 ಕೋಟಿ ರೂ‌. ಸಾಲ ಎತ್ತುವಳಿ ಮಾಡಲಿದೆ.‌ ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.

 


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ