ಆನೇಕಲ್: ಶಿಕ್ಷಕಿ ಬೈದರೆಂಬ ವಿಚಾರಕ್ಕೆ ಮನನೊಂದು 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಡುಗೆ ಸಹಾಯಕಿ ಹಾಗೂ ಮೂವರು ಶಿಕ್ಷಕಿಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಈರಪ್ಪ, ಸಹ ಶಿಕ್ಷಕಿಯರಾದ ಕವಿತಾ, ರೂಪಾ ಹಾಗೂ ಅಡುಗೆ ಸಹಾಯಕಿ ಕಮಲಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಧ್ಯಾರ್ಥಿನಿ ಮಧುಶ್ರೀಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿ ಮಧುಶ್ರೀ ಸಾಯುವ ಮುನ್ನ ಶಾಲಾ ವಿಧ್ಯಾರ್ಥಿಗಳು ಸೇರಿಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದ ವಿಚಾರದ ಬಗ್ಗೆ ಲೇಟರ್ ಬರೆದಿದ್ದರು. ಇದನ್ನು ಗ್ರಾಮಪಂಚಾಯಿತಿ ಪಿಡಿಓಗೆ ನೀಡಲು ನಿರ್ಧರಿಸಿ, ಮಧುಶ್ರೀ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಳು. ಈ ವಿಷಯ ತಿಳಿದು ಶಿಕ್ಷಕಿಯರು ಮಧುಶ್ರೀಯನ್ನ ಮತ್ತಷ್ಟು ಟಾರ್ಗೆಟ್ ಮಾಡಿದ್ರಂತೆ. ಅಲ್ಲದೇ ಸಾಯೋಕು ಹಿಂದಿನ ದಿನ ಶಾಲೆಯ ದೈಹಿಕ ಶಿಕ್ಷಕ ಶ್ರೀನಿವಾಸ್ ಅವರಿಗೆ ಮಧುಶ್ರೀ ಈ ಬಗ್ಗೆ ತಿಳಿಸಿದ್ದಳು.
ಅದೇ ದಿನ ಮನೆಗೆ ಬಂದ ಮಧುಶ್ರೀ, ಶಾಲೆಯಲ್ಲಿ ಶಿಕ್ಷಕಿಯರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ನಡೆದ ಎಲ್ಲಾ ವಿಚಾರವನ್ನ ಸಹೋದರಿ ಭಾನುಶ್ರೀ ಹೇಳಿದ್ದಳು. ಅದಾದ ಬಳಿಕ ಮಧುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಳು.
ಏನಿದು ಕೇಸ್?
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ 8ನೇ ತರಗತಿಯ ಮಧುಶ್ರೀ ಆತ್ಮಹತ್ಯೆಗೆ ಶರಣಾಗಿದ್ದಳು. ರಾಜ್ಯಮಟ್ಟದ ಕಬ್ಬಡಿ ಆಟಗಾರ್ತಿಯಾಗಿದ್ದ ವಿದ್ಯಾರ್ಥಿ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಜು.9ರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಘಟನಾ ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ, ಶಾಲೆಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವು ತಂದಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಅವಮಾನ ಸಹಿಸಿಕೊಂಡು ಬದುಕಲು ಆಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಬರೆದಿದ್ದಳು. ಅಮ್ಮ, ಅಕ್ಕ, ತಂಗಿ, ತಮ್ಮ ಯಾರದ್ದೂ ತಪ್ಪಿಲ್ಲ. ನನ್ನ ಅಮ್ಮನನ್ನು ಯಾರು ಕೂಡ ಬೈಯ್ಯಬೇಡಿ. ಎಲ್ಲರೂ ನನ್ನನ್ನು ಕ್ಷಮಿಸಿ. ನನಗೆ ಈ ಭೂಮಿ ಮೇಲೆ ಬದುಕುವ ಅರ್ಹತೆ ಇಲ್ಲ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಳು.
ಡೆತ್ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿದ್ಯಾರ್ಥಿನಿಯ ಸಾವಿನ ಕುರಿತು ತನಿಖೆ ಮುಂದುವರಿಸಿದ್ದಾರೆ.
Laxmi News 24×7