ಬೆಂಗಳೂರು: ಸಿದ್ದರಾಮಯ್ಯ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ನನ್ನ, ಸಿದ್ದರಾಮಯ್ಯ ನಡುವಿನ ಸಂಬಂಧದ ಬಗ್ಗೆ ಚರ್ಚೆ ಅನವಶ್ಯಕ. ಅವರ, ನನ್ನ ಸಂಬಂಧ ಹಾಳಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ನಡುವೆ ಭಿನ್ನಮತ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾನೂ ಹೇಳಿದ್ದೇನೆ. ನಮ್ಮ ನಡುವೆ ಗೊಂದಲವೇ ಇಲ್ಲ. ಕೆಲವು ಐಟಿ ಸೆಲ್ನವರು ಸ್ವಲ್ಪ ಹೆಚ್ಚಿನ ಪ್ರಚಾರ ಮಾಡಿದರು. ನಮಗೆ ಗೊತ್ತಿರುವ ಐಟಿ ಸೆಲ್ನವರೇ ಹೆಚ್ಚಿನ ಪ್ರಚಾರ ಕೊಟ್ಟರು. ಅನವಶ್ಯಕ ಚರ್ಚೆ ಆಗಿದೆ. ಅದರ ಬಗ್ಗೆ ಅಹಿಂದ ಸಂಘಟನೆ ಇದ್ದೇ ಇರುತ್ತದೆ. ಪಕ್ಷವನ್ನು ಹೊರತುಪಡಿಸಿಯೂ ಸಂಘಟನೆ ಕೆಲಸ ಇದ್ದೇ ಇರುತ್ತದೆ. ಅಹಿಂದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಅಧ್ಯಕ್ಷ ಆಗಿಯೇ ಪಕ್ಷದ ಕೆಲಸ ಮಾಡಬೇಕು ಅಂತೇನೂ ನಿಯಮವಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದ ಬಳಿಕ ಇದುವರೆಗೆ ಒಂದು ಸರ್ಕಾರ ರಿಪೀಟ್ ಆಗಿಲ್ಲ. ದುಡಿದರೆ ಕೂಲಿ ಸಿಕ್ಕಿಯೇ ಸಿಗುತ್ತದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕೆಲಸ ಮಾಡಿದ್ದೇವೆ ಅಂತ ಅವರಿಗೆ ಅಧಿಕಾರ ಕೊಟ್ಟರು. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರಿಗೆ ಅಧಿಕಾರ ಸಿಗಲೇಬೇಕು. 2028ರ ಬಗ್ಗೆ ಈಗಲೇ ಚರ್ಚೆ ಯಾಕೆ? ಇನ್ನೂ ಮಗುನೇ ಹುಟ್ಟಿಲ್ಲ ಚರ್ಚೆ ಯಾಕೆ? ನನಗೂ ಕೂಲಿ ಸಿಕ್ಕಿದೆ, ಮಂತ್ರಿ ಮಾಡಿದ್ದಾರೆ. ನನಗೆ ಡಬಲ್ ಸಮಾಧಾನ ಆಗಿದೆ. ಕೆಲಸ ಮಾಡುವವರಿಗೆ ಹುದ್ದೆ ಅವಶ್ಯಕತೆ ಇಲ್ಲ. ಹಿಂದಿನ ಚುನಾವಣೆ, ಮೊದಲಿನ ಚುನಾವಣೆ ಎಲ್ಲಾ ಸಂದರ್ಭದಲ್ಲಿ ಕೂಡ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ನಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆ ಕೇಳಿದ್ದೆ. ಬಹುಶಃ ಪರಮೇಶ್ವರ್ ಕೇಳಿ ತೆಗೆದುಕೊಂಡಿರಬಹುದು. ನನಗೆ ಕ್ರೀಡಾ ಖಾತೆ ಇಷ್ಟ ಇತ್ತು. ನಾನು ಪ್ರತಿ ವರ್ಷ 50 ಲಕ್ಷ ಖರ್ಚು ಮಾಡಿ ಸ್ಪೋರ್ಟ್ಸ್ ನಡೆಸುತ್ತೇನೆ. ಹಾಗಾಗಿ ಸ್ಪೋರ್ಟ್ಸ್ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆವು. ಸ್ಪೋರ್ಟ್ಸ್ನಲ್ಲಿ ರಾಜ್ಯ ನಂಬರ್ ವನ್ ಮಾಡುತ್ತಿದ್ದೇವೆ. ಹಿಂದೆಯೂ ಕ್ರೀಡಾ ಖಾತೆ ಕೇಳಿದ್ದೆವು, ಧರ್ಮಸಿಂಗ್ ಅವಧಿಯಲ್ಲಿ ಕೇಳಿದ್ದೆವು. ಈಗ ಪರಮೇಶ್ವರ್ ಅವರಿಗೆ ಕೊಟ್ಟಿದ್ದಾರೆ. ಅವರಿಗೆ ಕ್ರೀಡೆ ಬಗ್ಗೆ ಒಲವಿದೆ, ಅದಕ್ಕೆ ಕೇಳಿ ಪಡೆದಿರಬಹುದು ಎಂದರು.
ಹೊಸ ಬೇಡಿಕೆಗಳು ಕಾಲಕ್ಕೆ ತಕ್ಕಂತೆ ಆಗುತ್ತದೆ. ಸಿಎಂ ಆಗೋಕೆ ಅಧ್ಯಕ್ಷ ಸ್ಥಾನವೇ ಬೇಕೆಂದಿಲ್ಲ. ನಾವು ಶಿಗ್ಗಾಂವಿ ಗೆದ್ದಿದ್ದೇವೆ, ಬಾಗಲಕೋಟೆ ಗೆದ್ದಿದ್ದೇವೆ. ಹಾಗಾಗಿ ಸಿಎಂ ಆಗೋಕೆ ಅಧ್ಯಕ್ಷರೇ ಬೇಕೆಂದಿಲ್ಲ. ಕೆಲಸ ಮಾಡಿದ್ದರೆ ಕೂಲಿ ಸಿಗುತ್ತದೆ. ಈಗ ಯಾಕೆ ಅವರಿಗೆ ಸಿಎಂ ಕೊಟ್ಟಿದ್ದಾರೆ, ಕೆಲಸ ಮಾಡಲಿ ಅಂತ ಕೊಟ್ಟಿದ್ದಾರೆ. 2028ಕ್ಕೆ ಪಕ್ಷ ಕಟ್ಟುತ್ತೇವೆ. ಕೆಲಸ ಮಾಡಿದರೆ ಕೂಲಿ ಸಿಗುತ್ತದೆ. ಡಿಕೆಶಿ ಹೇಳಿಕೆ ಕೊಟ್ರೆ ತಪ್ಪೇನಿಲ್ಲ. ಅವರು ಗೆಲ್ಲಿಸಿದರೆ ಅವರಿಗೆ ಫಲ ಸಿಗಲಿದೆ. ನಮಗೆ ಇನ್ನೂ ವಯಸ್ಸಿದೆ ಕಾಯೋಣ ಎಂದು ತಿಳಿಸಿದರು.
ಕೃಷ್ಣಬೈರೇಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ಇಲಾಖೆ ಎಲ್ಲವೂ ಕಂಬೈನ್ಡ್ ಇದ್ರೆ ಕೆಲಸ ಮಾಡೋಕೆ ಅನುಕೂಲ ಅಂತ ಕೇಳುತ್ತಿದ್ದಾರೆ. ಅದು ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ, ಅವರು ಅದನ್ನ ಬಗೆಹರಿಸುತ್ತಾರೆ ಎಂದರು.
Laxmi News 24×7