ಬೆಂಗಳೂರು: ರಾಜಧಾನಿಯ ಕಾಡುಗೋಡಿಯಲ್ಲಿ ಸ್ವಂತ ಮಗಳು ವೆನ್ನೆಲಾಳನ್ನು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕಲ್ಲೆದೆಯ ತಾಯಿ ಪ್ರಿಯಾಂಕಳನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ ಈಕೆಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suwarna News) ವರದಿ ಮಾಡಿದೆ.
ಮಾರ್ಚ್ ತಿಂಗಳಲ್ಲೇ ನಡೆದಿದ್ದ ಈ ಘೋರ ಹತ್ಯೆ ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಸಿನೆಮಾ ಶೈಲಿಯಲ್ಲಿ ಎಸ್ಕೇಪ್.. ಪೊಲೀಸರಿಂದ ಸಕಲೇಶಪುರದಲ್ಲಿ ಲಾಕ್!
ಮಗುವನ್ನು ಹತ್ಯೆಗೈದ ವಿಷಯ ಬಹಿರಂಗವಾಗುತ್ತಿದ್ದಂತೆ ಆರೋಪಿ ಪ್ರಿಯಾಂಕ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಜಾಗ ಬದಲಾಯಿಸುತ್ತಿದ್ದಳು.
ಬೆಂಗಳೂರಿನಿಂದ ಮೊದಲು ಮೈಸೂರಿಗೆ ಓಡಿಹೋಗಿದ್ದಳು.
ಅಲ್ಲಿ ಪೊಲೀಸರು ತನ್ನನ್ನು ಬೆನ್ನಟ್ಟುತ್ತಿರುವ ಸುಳಿವು ಸಿಗುತ್ತಿದ್ದಂತೆ ಅಲ್ಲಿಂದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ತೆರಳಿ ಅಡಗಿಕೊಂಡಿದ್ದಳು.
ಕಾಡುಗೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಸತತ ಕಾರ್ಯಾಚರಣೆ ನಡೆಸಿ, ಕೊನೆಗೂ ಆಕೆಯನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಮಕ್ಕಳ ರಕ್ಷಣಾ ಆಯೋಗ ಆಕ್ರೋಶ
ಮಾರ್ಚ್ನಲ್ಲೇ ಕೊಲೆಯಾಗಿದ್ದರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವ ಪೊಲೀಸ್ ಇಲಾಖೆಯ ನಡೆಗೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ಮಕ್ಕಳ ವಿಷಯದಲ್ಲಿ ಇಂತಹ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವನ್ನು ಯಾರೂ ಸಹಿಸಬಾರದು” ಎಂದು ಅವರು ಗುಡುಗಿದ್ದಾರೆ.
Laxmi News 24×7