ಚಿಕ್ಕಮಗಳೂರು: ಕೊರೊನಾ ವೈರಸ್ಗೆ ಆತಂಕಗೊಂಡು ಕಳೆದ 26 ದಿನಗಳಿಂದ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮದ ಜನ ಇಂದಿಗೂ ದಿನಕ್ಕೆ 19 ಗಂಟೆಗಳ ಕಾಲ ಗ್ರಾಮದ ದ್ವಾರಬಾಗಿಲಲ್ಲಿ ಕಾವಲು ಕೂತಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇವತ್ತು ನೆಗೆಟಿವ್ ಇದ್ದ ಜಿಲ್ಲೆಯಲ್ಲಿ ಬೆಳಗಾಗುವಷ್ಟರಲ್ಲಿ ಎರಡು-ಮೂರು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಇಷ್ಟು ದಿನ ಜಿಲ್ಲೆ, ತಾಲೂಕು, ಪಟ್ಟಣಗಳಲ್ಲಿದ್ದ ಕೊರೊನಾ ಹಳ್ಳಿಗೂ ಕಾಲಿಟ್ಟಿರುವುದರಿಂದ ಜನ ಮತ್ತಷ್ಟು ಭಯಗೊಂಡಿದ್ದಾರೆ. ಹೀಗಾಗಿ ಯುವಕರು ಗ್ರಾಮದ ಮುಂಭಾಗ ಟೋಲ್ ಗೇಟ್ ನಿರ್ಮಿಸಿ ಪೊಲೀಸರಂತೆ ಕಾವಲು ಕೂತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 1 ಗಂಟೆವರೆಗೂ ಕಾವಲು ಕೂತಿದ್ದಾರೆ. ವಿದೇಶ, ಹೊರರಾಜ್ಯ, ಬೆಂಗಳೂರು, ಮೈಸೂರು ಸೇರಿದಂತೆ ಅಕ್ಕಪಕ್ಕದ ಊರಿನವರೂ ಯಾರೂ ಬರುವಂತಿಲ್ಲ. ಕದ್ದು ಮುಚ್ಚಿ ಯಾರಾದರೂ ಬಂದರೆ ಅವರ ವಿರುದ್ಧ ಗ್ರಾಮಸ್ಥರಿಂದ ಸೂಕ್ತ ಕ್ರಮವೆಂದು ಬೋರ್ಡ್ ಹಾಕಿದ್ದಾರೆ. ಯಾರಾದರೂ ಕದ್ದು ಮುಚ್ಚಿ ಗ್ರಾಮಕ್ಕೆ ಬಂದರೆ ಅಕ್ಕಪಕ್ಕದವರು ಗ್ರಾಮದ ಮುಖಂಡರಿಗೆ ತಿಳಿಸುವಂತೆ ತೀರ್ಮಾನಿಸಿದ್ದಾರೆ.
ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಅದು ಹಾಗೇ ಇರಲಿ ಎಂದು ಜಿಲ್ಲೆಯ ಬಹುತೇಕ ಗ್ರಾಮಗಳು ಗ್ರಾಮದ ಗಡಿಯಲ್ಲಿ ಬಂದೋಬಸ್ತ್ ಮಾಡಿದ್ದಾರೆ. ಊರಿನ ಯುವಕರು ಶಿಫ್ಟ್ ಆಧಾರದಲ್ಲಿ ದಿನಕ್ಕೆ ಮೂರು ಶಿಫ್ಟ್ನಂತೆ ಕಾದು ಕೂತಿದ್ದಾರೆ.