ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದು, ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೆ ನಮ್ಮ ನಾಡಿನ ಹಿರಿಯರೊಂದಿಗೆ ಚರ್ಚೆ ನಡೆಸಲಾಗಿದೆ. ಕೊರೊನಾ ಹೆಮ್ಮಾರಿಯಿಂದ ಶಿಕ್ಷಣ ಇಲಾಖೆಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ತರಗತಿಗಳು ಹೇಗಿರಬೇಕು ಅಂತಾ ಚರ್ಚೆ ನಡೆಸುತ್ತಿದ್ದೇವೆ. ನಾಳೆ ಶಿಕ್ಷಕರ ಮತ್ತು ಪದವೀದರ ಕ್ಷೇತ್ರದ ಪರಿಷತ್ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದೇನೆ ಎಂದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಲ್ಲರ ಸಲಹೆಗಳನ್ನು ಪಡೆದು ಪರೀಕ್ಷೆ ನಡೆಸಬೇಕೋ? ಬೇಡವೋ? ಅನ್ನೋದು ನಿರ್ಧಾರವಾಗಲಿದೆ. ಬಹುತೇಕ ಮಂದಿ ಪರೀಕ್ಷೆ ನಡೆಸಿ ಅಂತಿದ್ದಾರೆ. ಪರೀಕ್ಷೆ ಕೇಂದ್ರಗಳನ್ನು ಹೆಚ್ಚು ಮಾಡುವ ಕುರಿತು ತೀರ್ಮಾನ ಕೂಡ ಮಾಡಲಾಗಿದೆ. ಸೋಮವಾರ ಎಲ್ಲಾ ಸಾಧಕ ಬಾದಕಗಳ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ತೇವೆ ಎಂದು ಮಾಹಿತಿ ನೀಡಿದರು.