ಯಡಿಯೂರಪ್ಪ ಕೊಟ್ಟ ಮಾತಿನಂತೆ ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ಜೊತೆ ಬೃಹತ್ ನೀರಾವರಿ ಖಾತೆ ಕೊಡುವುದು, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್ಗೆ ಪ್ರಮುಖ ಖಾತೆಗಳನ್ನು ನೀಡಬೇಕು ಎಂಬುದು ಸೇರಿದಂತೆ ಕೆಲವು ಬೇಡಿಕೆಗಳ ಪಟ್ಟಿಯನ್ನು ಬಿಎಸ್ವೈ ಮುಂದಿಡಲು ಮುಂದಾಗಿದ್ದಾರೆ.
ಬೆಂಗಳೂರು, ಜ.25- ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಕಗ್ಗಾಂಟಾಗಿ ಪರಿಣಿಮಿಸಿರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಕಚೇರಿಯಿಂದ ಈಗಾಗಲೇ ರಾಜಭವನಕ್ಕೆ ಮಾಹಿತಿ ನೀಡಲಾದೆ. ಸೋಮವಾರ ಸಂಪುಟ ವಿಸ್ತರಣೆ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಉಪಚುನಾವಣೆಯಲ್ಲಿ ಗೆದ್ದಿರುವ 9 ರಿಂದ 11 ಮಂದಿ ಶಾಸಕರು ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಜೊತೆ ಮಾತುಕತೆ ನಡೆಸಿದ ಯಡಿಯೂರಪ್ಪ ಅವರು, ಸೋಮವಾರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಪ್ರಸ್ತುತ ಸಂಪುಟದಲ್ಲಿ 16 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ವಲಸಿಗ ಶಾಸಕರಿಗ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಬಿಎಸ್ವೈ ಬಿಗಿಪಟ್ಟು ಹಿಡಿದಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂತೋಷ್, ಸೋಮವಾರ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್-ಜೆಡಿಎಸ್ನಿಂದ ಬಂದು ಉಪಚುನಾವಣೆಯಲ್ಲಿ ಗೆದ್ದಿರುವ 11 ಶಾಸಕರ ಪೈಕಿ ಮೊದಲ ಹಂತದಲ್ಲಿ 6 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡೋಣ. ಮೂಲ ಬಿಜೆಪಿಯಿಂದ ನಾಲ್ವರು ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಆರು ಖಾತೆಗಳನ್ನು ಖಾಲಿ ಬಿಟ್ಟು ಮುಂದೆ ನಡೆಯುವ ರಾಜಕೀಯ ವಿದ್ಯಮಾನಗಳನ್ನು ನೋಡಿಕೊಂಡು ತೀರ್ಮಾನ ತೆದುಕೊಳ್ಳೋಣ ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ಇದನ್ನು ಒಪ್ಪದ ಯಡಿಯೂರಪ್ಪ ಕನಿಷ್ಟ ಪಕ್ಷ 11 ಮಂದಿಯಲ್ಲಿ 9 ಶಾಸಕರಿಗಾದರೂ ಸಚಿವ ಸ್ಥಾನ ನೀಡಲೇಬೇಕು. ಶಾಸಕರಾದ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ್ ಪಾಟೀಲ್ಗೆ 3ನೇ ಹಂತದ ವಿಸ್ತರಣೆಯಲ್ಲಿ ಸಂಪುಟಕ್ಕೆ ತೆಗೆದುಕೊಂಡರಾಯಿತು. ಅವರಿಬ್ಬರ ಮನವೊಲಿಸುವ ಜವಾಬ್ದಾರಿ ನನ್ನದು. 9 ಶಾಸಕರಿಗೆ ಕೊಟ್ಟಿರುವ ವಾಗ್ದಾನದಂತೆ ನಾವು ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಫಲಿತಾಂಶ ಪ್ರಕಟಗೊಂಡು 24 ಗಂಟೆಯೊಳಗೆ ನಾನು ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಆಶ್ವಾಸನೆ ಕೊಟ್ಟಿದ್ದೆ. ಇದರಿಂದ ಜನರು ಹೆಚ್ಚಿನ ಮತಗಳಿಂದ ಬಿಜೆಪಿ ಅಭ್ಯರ್ಥಿಗಳಾಗಿದ್ದ ಅವರನ್ನು ಆರಿಸಿದ್ದಾರೆ. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಜನತೆಯ ಮುಂದೆ ನಾನು ವಚನಭ್ರಷ್ಟನಾಗುತ್ತೇನೆ ಎಂದು ಬಿಎಸ್ವೈ ತಮ್ಮ ದುಗುಡ ತೋಡಿಕೊಂಡಿದ್ದಾರೆ.
ಅಂತಿಮವಾಗಿ 9 ಮಂದಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿಎಸ್ವೈ ತೀರ್ಮಾನಿಸಿದ್ದು, ಮೂಲ ಬಿಜೆಪಿಯಿಂದ ಉಮೇಶ್ ಕತ್ತಿ, ಎಸ್.ಅಂಗಾರ ಇಲ್ಲವೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಚಿತ್ರದುರ್ಗದಿಂದ ಜಿ.ಎಚ್.ತಿಪ್ಪಾರೆಡ್ಡಿ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಸೋಮವಾರ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುಳಿವು ಹಿನ್ನೆಲೆಯಲ್ಲಿ ಶಾಸಕರಾದ ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ ಸೇರಿದಂತೆ ಮತ್ತಿತರರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ್ದಾರೆ.
ಯಡಿಯೂರಪ್ಪ ಕೊಟ್ಟ ಮಾತಿನಂತೆ ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ಜೊತೆ ಬೃಹತ್ ನೀರಾವರಿ ಖಾತೆ ಕೊಡುವುದು, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್ಗೆ ಪ್ರಮುಖ ಖಾತೆಗಳನ್ನು ನೀಡಬೇಕು ಎಂಬುದು ಸೇರಿದಂತೆ ಕೆಲವು ಬೇಡಿಕೆಗಳ ಪಟ್ಟಿಯನ್ನು ಬಿಎಸ್ವೈ ಮುಂದಿಡಲು ಮುಂದಾಗಿದ್ದಾರೆ.
ಸಂಜೆ ಸಭೆ: ಇನ್ನು ಸಚಿವಾಕಾಂಕ್ಷಿಗಳ ಜೊತೆ ಯಡಿಯೂರಪ್ಪ ಸಂಜೆ ತಮ್ಮ ದವಳಗಿರಿ ನಿವಾಸದಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಮುನ್ನ ಶಾಸಕರು ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಸಭೆ ಸೇರಿ ಅಲ್ಲಿಯೇ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿತ್ತು. ಯಶವಂತಪುರ ಎಸ್.ಟಿ.ಸೋಮಶೇಖರ್ ಮೈಸೂರಿಗೆ ತೆರಳಿದ್ದು, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅನ್ಯ ಕಾರ್ಯಗಳ ನಿಮಿತ್ತ ಸಂಜೆಯೊಳಗೆ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಹೀಗಾಗಿ ಸಂಜೆ ಯಡಿಯೂರಪ್ಪ ಈ ಎಲ್ಲಾ ಶಾಸಕರನ್ನು ತಮ್ಮ ನಿವಾಸಕ್ಕೆ ಬರಬೇಕೆಂದು ಆಹ್ವಾನ ಕೊಟ್ಟಿದ್ದು, ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರು ಹಾಗೂ ಖಾತೆಗಳ ಹಂಚಿಕೆಯ ವಿವರಗಳನ್ನು ನೀಡಲಿದ್ದಾರೆ. ಉಪಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ಗೆ ಸದ್ಯ ಸಚಿವ ಸ್ಥಾನ ಸಿಗುವುದು ಕಷ್ಟಕರವಾಗಿದ್ದು, ಆರ್.ಶಂಕರ್ ಮೇಲ್ಮನೆಗೆ ನಾಮಕರಣವಾಗಲು ಜುಲೈವರೆಗೂ ಕಾಯಲೇಬೇಕು. ಇನ್ನು ಶ್ರೀಮಂತ್ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿಗೆ ಪ್ರಬಲವಾದ ನಿಗಮ ಮಂಡಳಿಯನ್ನು ನೀಡಲು ಬಿಎಸ್ವೈ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ