Breaking News

ಜಾನುವಾರುಗಳನ್ನು ರಸ್ತೆಗಿಳಿಸಿ ರೈತರ ಪ್ರತಿಭಟನಾ ಮೆರವಣಿಗೆ

Spread the love

ಬೆಳಗಾವಿ : ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೀಡಿದ ಭೂಮಿಗೆ ನ್ಯಾಯಯುತ ಪರಿಹಾರ ಹಾಗೂ ಸೂಕ್ತ ಪುನರ್ವಸತಿಗೆ ಆಗ್ರಹಿಸಿ ಎರಡು ದಿನಗಳಿಂದ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿರುವ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬುಧವಾರ ಜಾನುವಾರುಗಳನ್ನು ರಸ್ತೆಗಿಳಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಗಳವಾರದಿಂದ ನೀರಾವರಿ ನಿಗಮದ ಆವರಣದಲ್ಲೇ ವಾಸ್ತವ್ಯ ಹೂಡಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಾಸ್ತ್ತಿಹೊಳಿ, ಗುಡಗನಟ್ಟಿ, ಬೀರನಹೊಳಿ, ಸುತಗಟ್ಟಿ ಹಾಗೂ ಜಾರಕಿಹೊಳಿ ಗ್ರಾಮಗಳ 500ಕ್ಕೂ ಹೆಚ್ಚು ರೈತರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕ್ಲಬ್ ರಸ್ತೆಯ ನೀರಾವರಿ ನಿಗಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜೋಡೆತ್ತು ಹಾಗೂ ಇತ
ರೆ ಜಾನುವಾರು, ಚಕ್ಕಡಿ, ಮೇವಿನ ಸಮೇತ ಆಗಮಿಸಿದ್ದರು. ಮಧ್ಯದಲ್ಲಿ ಚನ್ನಮ್ಮ ವೃತ್ತದಲ್ಲಿ ಕೆಲಹೊತ್ತು ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಬುಧವಾರ ರೈತರ ಕುಟುಂಬ ಸದಸ್ಯರು ಸಹ ಸಾಥ್ ನೀಡಿದರು. ಮುಖ್ಯವಾರಿ ರೈತರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು:
ಕೆಲಹೊತ್ತು ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ, ಪ್ರಮುಖರು ಮಾತನಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಆಗಮಿಸಿದಾಗ, ಎಷ್ಟೇ ತಡವಾದರೂ ನಾವು ಕಾಯುತ್ತೇವೆ. ಬಿಸಿಲಿನಲ್ಲೇ ನಿಲ್ಲುವುದಕ್ಕೆ ಸಿದ್ಧ. ಆದರೆ ಜಿಲ್ಲಾಧಿಕಾರಿಯೇ ಮನವಿ ಸ್ವೀಕರಿಸಲು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಅನ್ಯ ಕಾರ್ಯದಲ್ಲಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕೆಲ ಸಮಯದ ಬಳಿಕ ಅಗಮಿಸಿ ರೈತರ ಮನವಿ ಸ್ವೀಕರಿಸಿದರು.
ಬಾಳೇಶ ಮಾವನೂರೆ, ಸಂತೋಷ ಪಾಟೀಲ, ಮಲಗೌಡ ಪಾಟೀಲ, ಬಾಳೇಶ ಪಾಟೀಲ, ಉದಯ ಹಿರೇಮಠ, ಸಿದ್ಧಲಿಂಗ ಬೆನ್ನಾಡಿ, ರಾಜು ಹುದ್ದಾರ, ಬರಮಾ ಮುಂಗಾರಿ, ಬಾಳೇಶ ಪಾಶ್ಚಾಪುರೆ, ಪತ್ರೆಪ್ಪ ಮಾಲಾದಾನಿ, ಸುನೀಲ ಕೋಳಿ, ದುಂಡಪ್ಪ ಪಾಟೀಲ ಬಾಳೇಶ ಹಲಕರ್ಣಿ, ಬಾಳೇಶ ಬಂಬರಗಿ, ಅಪ್ಪಯ್ಯ ಗುತ್ತಿ, ನಿಂಗಣ್ಣಗೌಡ ಪಾಟೀಲ ಇತರರಿದ್ದರು.

Spread the love

About Laxminews 24x7

Check Also

ಚಾಮುಂಡಿ ಬೆಟ್ಟದಲ್ಲಿ ಜು.17 ರಿಂದ ಆಷಾಢ ಮಾಸದ ಪೂಜೆ – ಸಿದ್ಧತೆ ಪರಿಶೀಲಿಸಿದ ಯತೀಂದ್ರ ಸಿದ್ದರಾಮಯ್ಯ

Spread the loveಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಕಳೆಗಟ್ಟಿದೆ, ವಿವಿಧ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ಹಬ್ಬದ ವಾತಾವರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ