ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿನೂರಿನಲ್ಲಿ ಕೊರೊನಾ ಅಬ್ಬರ ಹಿನ್ನೆಲೆ, ತಾಲೂಕಿನಲ್ಲಿ ಹೊಸದಾಗಿ ಸರಿ ಸುಮಾರು 1000 ಮಂದಿಯನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ಸೋಂಕಿತರ ಮನೆಗಳಿರುವ ಹಿರೇಬಿದನೂರಿನ 132 ಮನೆಗಳಲ್ಲಿರುವ 872 ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಮತ್ತೊಂದೆಡೆ ತಾಲೂಕಿನ ತೊಂಡೆಬಾವಿ ಗ್ರಾಮದಲ್ಲೂ ಸಹ 30 ಮನೆಗಳಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕಿತರ ಮನೆಗಳಿರುವ ಗ್ರಾಮದ ನಿವಾಸಿಗಳನ್ನು ಸಂಪೂರ್ಣವಾಗಿ ಹೋಂ ಕ್ವಾರಂಟೈನ್ ಗೆ ಗುರಿಪಡಿಸಲಾಗುತ್ತಿದೆ.ಈಗಾಗಲೇ ಗೌರಿಬಿದನೂರು ತಾಲೂಕು ಆರೋಗ್ಯಾಧಿಕಾರಿ ರತ್ನಮ್ಮ ನೇತೃತ್ವದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರತಿಯೊಬ್ಬ ಸದಸ್ಯರಿಗೂ ಕ್ವಾರಂಟೈನ್ ಸ್ಟಾಂಪಿಂಗ್ ಮಾಡಲಾಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ತಾಲೂಕು ಆರೋಗ್ಯಾಧಿಕಾರಿ ರತ್ಮಮ್ಮ ಮಾಹಿತಿ ನೀಡಿದರು. ಈ ಎಲ್ಲಾ ಮನೆಗಳಲ್ಲಿನ ಸದಸ್ಯರು ಯಾರೂ ಕೂಡ ಮನೆಗಳಿಂದ ಹೊರಬರುವಂತಿಲ್ಲ. ಇವರ ಮನೆಗಳಿಗೆ ಅಗತ್ಯ ಎಲ್ಲಾ ದಿನ ಬಳಕೆ ವಸ್ತುಗಳನ್ನು ದಾನಿಗಳಿಂದ ಪಡೆದು ಮನೆಗಳಿಗೆ ಕಳಿಸಿಕೊಡುವ ಕೆಲಸ ಮಾಡಲಾಗುತ್ತದೆ.ಈಗಾಗಲೇ ಅಗತ್ಯ ದಿನಸಿ ವಸ್ತುಗಳನ್ನ ಸಂಗ್ರಹಿಸಲಾಗಿದ್ದು, ತರಕಾರಿಗಳನ್ನು ಸಹ ಪ್ಯಾಕ್ ಮಾಡಿ ನಾಳೆ ಬೆಳಿಗ್ಗೆಯಿಂದಲೇ ಮನೆ ಮನೆಗಳಿಗೆ ವಿತರಿಸುವ ಕಾಯಕ ನಡೆಯಲಿದೆ. ಇವರ್ಯಾರು ಕೂಡ ಗೌರಿಬಿದನೂರು ನಗರಕ್ಕೂ ಕೂಡ ಪ್ರವೇಶ ಮಾಡುವಂತಿಲ್ಲ. ಇವರ ಗ್ರಾಮಗಳನ್ನೇ ಸಂಪೂರ್ಣ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ಹರಡದಂತೆ ತಡೆಯಲು ಹೊಸ ಪ್ಲಾನ್ ರೂಪಿಸಿದೆ.ಈ ಕೊರೊನಾ ವೈರಸ್ ಹರಡದಂತೆ ತಡೆಯುವ ಸಲುವಾಗಿ ಮೂಲತಃ ಗೌರಿಬಿದನೂರಿನವರಾದ ಹಿರಿಯ ಕೆಎಎಸ್ ಅಧಿಕಾರಿ ವರಪ್ರಸಾದರೆಡ್ಡಿಯನ್ನ ನೇಮಿಸಿದ್ದು, ಅವರ ಉಸ್ತುವಾರಿಯಲ್ಲಿ ಈ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಅಂದಹಾಗೆ ಗೌರಿಬಿದನೂರಿನಲ್ಲಿ 9 ಮಂದಿಗೆ ಸೋಂಕು ದೃಢವಾಗಿದ್ದು, ಓರ್ವ ವೃದ್ಧೆ ಈಗಾಗಲೇ ಸೋಂಕಿಗೆ ಬಲಿಯಾಗಿದ್ದಾರೆ.