ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಹಳೆಯ ವಿಡಿಯೋವೊಂದು ಮುನ್ನಲೆಗೆ ಬಂದಿದೆ. ಸುಶಾಂತ್ ಅಭಿಮಾನಿಗಳು ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಾಲಿವುಡ್ನಲ್ಲಿ ನೆಪಟೋಯಿಸಂ ಮತ್ತು ನಿರ್ದೇಶಕ ಕರಣ್ ಜೋಹರ್ ವಿರುದ್ಧ ಕಿಡಿಕಾರಿದ್ದಾರೆ.
ಬಾಲಿವುಡ್ನಲ್ಲಿ ಸ್ಟಾರ್ ಕುಡಿಗಳಿಗೆ ಮಾತ್ರ ಸಿನಿ ಅಂಗಳದಲ್ಲಿ ಬೆಳೆಯಲು ಬಿಡುತ್ತಾರೆ. ಹೊಸ ಕಲಾವಿದರನ್ನು ತುಳಿದು ಹಾಕೋ ಪ್ರಯತ್ನ ನಡೆಯುತ್ತಿರುತ್ತೆ ಅನ್ನೋ ಮಾತುಗಳು ಬಾಲಿವುಡ್ ನಲ್ಲಿ ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಈ ಬಗ್ಗೆ ಕೆಲ ಯುವ ಕಲಾವಿದರು ಧ್ವನಿ ಎತ್ತಿರುತ್ತಾರೆ. ಇನ್ನು ಯಾರ ಸಹಾಯವಿಲ್ಲದೇ ಬೆಳೆಯುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಅವರನ್ನ ಮಾನಸಿಕವಾಗಿ ಕುಗ್ಗಿಸೋ ಪ್ರಯತ್ನಗಳು ನಡೆಯುತ್ತಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಾಲಿವುಡ್ ನಿರ್ದೇಶಕರಾಗಿರುವ ಕರಣ್ ಜೋಹರ್ ಸಂತಾಪ ಸೂಚಿಸಿರುವುದಕ್ಕೆ ಸುಶಾಂತ್ ಅಭಿಮಾನಿಗಳು ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ನೀವು ಕೇವಲ ಸ್ಟಾರ್ ಕಲಾವಿದರ ಜೊತೆ ಮಾತ್ರ ಕೆಲಸ ಮಾಡುವ ವ್ಯಕ್ತಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕಾಫಿ ವಿಥ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಕಂಗನಾ ನೆಪ್ಟೋಯಿಸಂ ಬಗ್ಗೆ ಕರಣ್ ಜೋಹರ್ ಮುಂದೆಯೇ ಆಕ್ರೋಶ ಹೊರ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?: ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕಂಗನಾ ಮತ್ತು ಸೈಫ್ ಅಲಿ ಖಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕರಾಗಿದ್ದ ಕರಣ್ ಪ್ರಶ್ನೆಯೊಂದಕ್ಕೆ ಕಂಗನಾ ಗರಂ ಆಗಿಯೇ ಉತ್ತರ ನೀಡಿದ್ದರು. ನಿಮ್ಮ ಮುಂದೆ ಅನಗತ್ಯವಾಗಿ ಆಟಿಟ್ಯೂಡ್ ತೋರಿಸಿದ ನಟ/ನಟಿ ಯಾರು ಎಂದು ಕೇಳಲಾಗಿತ್ತು. ಕಂಗನಾ ಮಾತ್ರ ಸ್ವಲ್ಪವೂ ಯೋಚಿಸದೇ ಕರಣ್ ನೀವು ಎಂದು ಉತ್ತರ ನೀಡಿದ್ದರು. ಈ ವೇಳೆ ಕರಣ್, ಹೌದಾ ಎಂದು ಹೇಳಿ ಕ್ಷಮೆ ಕೇಳಿದ್ದರು.
ಇಷ್ಟು ಮಾತ್ರವಲ್ಲದೇ ಒಂದು ವೇಳೆ ನೀವು ಜೀವನ ಕಥೆಯನ್ನು ಸಿನಿಮಾ ಮಾಡಿದ್ರೆ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ತೀಕ್ಷ್ಣವಾಗಿ ಮಾತನಾಡಿದ್ದರು.