ಬೆಳಗಾವಿ: ಲಾಕ್ ಡೌನ್ ದಿಂದ ನೇಕಾರರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇದರಿಂದ ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನೇಕಾರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಒತ್ತಾಯಿಸಿದ್ದಾರೆ.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಪ್ರವಾಹ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದ್ರೆ ಅವು ಕೈ ಸೇರುವ ಮುನ್ನವೆ ಕೊರೊನಾ ಹಾವಳಿ ಹೆಚ್ಚಾಯಿತು. ಆದ ಕಾರಣ ಪ್ಯಾಕೇಜ್ ಕೈ ಸೇರಲಿಲ್ಲ ಎಂದರು.
ಅಂದು ಪ್ರವಾಹಕ್ಕೆ, ಇಂದು ಕೊರೊನಾಗೆ ಸಿಲುಕಿ ನೇಕಾರರ ಬದುಕು ಬೀದಿ ಬಂದಂತಾಗಿದೆ. ನೇಕಾರರು ತಯಾರಿಸಿದ ಲಕ್ಷಾಂತರ ಸೀರೆಗಳಿಗೆ ಬೇಡಿಕೆ ಇಲ್ಲದೆ ಮನೆಯಲ್ಲಿ ಸಂಗ್ರಹ ಮಾಡಲಾಗಿದೆ. ಆದ ಕಾರಣ ಸರ್ಕಾರವೇ ಸೀರೆಗಳನ್ನು ಖರೀದಿಸಬೇಕು. ಕೂಲಿ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.
ನೇಕಾರರ ಅಭಿವೃದ್ಧಿಗೋಸ್ಕರ ಪ್ರಾಧಿಕಾರವನ್ನು ತೆರೆಯಬೇಕು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಜವಳಿ ಕ್ಷೇತ್ರದ ನಿಗಮಗಳು ಅನುದಾನವಿಲ್ಲದೆ, ಯೋಜನೆ ಇಲ್ಲದೆ ನಿಷ್ಕ್ರಿಯವಾಗಿವೆ. ಇವುಗಳನ್ನು ಪುನಶ್ಚೇತನಗೊಳಿಸಬೇಕು ಎಂದರು.
ಇದೇ ವೇಳೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನೇಕಾರರ 2 ಕುಟುಂಬಗಳಿಗೆ ತಲಾ ಐದು ಸಾವಿರ ಪರಿಹಾರದ ಚಕ್ ವಿತರಿಸಿದರು.
ಶಂಕರಣ್ಣಾ ಮುರುಡಿ, ಸಂತೋಷ ಅತ್ತಿಮರದ, ವಿನೋದ ಬಂಗೋಡಿ ಕೃಷ್ಣಾ ಕುಬೇರ ಇತರರು ಇದ್ದರು.