ಚಿಕ್ಕೋಡಿ: ಮಳೆಗಾಲ ಶುರುವಾದ ಹಿನ್ನಲೆ ಪ್ರವಾಹ ನಿರ್ವಹಣೆ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಗೋವಿಂದ ಕಾರಜೋಳ ಚಿಕ್ಕೋಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಳೆದವಾರ ಸುರಿದ ಮಳೆಗೆ ಜಿಲ್ಲೆಯ ನದಿಗಳು ಉಕ್ಕಿ ಹರಿದ ಪರಿಣಾಮ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯ ಪ್ರಮುಖ ನದಿಗಾಳಾದ ಕೃಷ್ಣಾ, ಮಲಪ್ರಭಾ, ದೂದಗಂಗಾ, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದವು ಸದ್ಯ ಮಳೆಯ ಪ್ರಮಾಣ ತಗ್ಗಿದ್ದು ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿದೆ ಈಗ ಮತ್ತೆ ಮಳೆಗಾಲ ಆರಂಭವಾದಲ್ಲಿ ಸಂಭವನೀಯ ಪ್ರವಾಹ ಬರಲಿದ್ದು, ಇಗಲೇ ಪ್ರವಾಹ ಎದುರಿಸಲು ತಯಾರಿ ನಡೆಸಬೇಕು ಎಂದು ಅಧಿಕಾರಿಳಿಗೆ ಸೂಚನೆ ನೀಡಿದ್ದಾರೆ.ಚಿಕ್ಕೋಡಿಯಲ್ಲಿ ಮುಂಗಾರು ಮಳೆಯಿಂದ ಆಗಿರುವ ತೊಂದರೆಗಳು, ಪರಿಹಾರ ಕ್ರಮ ಹಾಗೂ ಕೊವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದೆ.
ಚಿಕ್ಕೋಡಿಯಲ್ಲಿ ಮುಂಗಾರು ಮಳೆಯಿಂದ ಆಗಿರುವ ತೊಂದರೆಗಳು, ಪರಿಹಾರ ಕ್ರಮ ಹಾಗೂ ಕೊವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದೆ. pic.twitter.com/JbGtGcPLae
— Deputy Chief Minister (@GovindKarjol) June 23, 2021
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಪ್ರವಾಹ ಚಿಕ್ಕೋಡಿ ಭಾಗದಲ್ಲಿ ಬರುತ್ತದೆ. ಎಲ್ಲಾ ಅಧಿಕಾರಿಗಳ ಸಭೆ ನಡೆಸಲಾಗಿದೆ. ಚಿಕ್ಕೋಡಿ ವಿಭಾಗದಲ್ಲಿ ಒಟ್ಟು 168 ಕಾಳಜಿ ಕೇಂದ್ರಗಳ ಸ್ಥಾಪನೆಗೆ 168 ಜಾನುವಾರು ರಕ್ಷಣಾ ಕೇಂದ್ರಗಳು ತೆರೆಯಲು ಸೂಚನೆ ನೀಡಲಾಗಿದೆ. ಒಟ್ಟು 27 ಬೋಟ್ ಗಳಿದ್ದು ಸಿಬ್ಬಂದಿ ನೇಮಕಾತಿ ಸೇರಿದಂತೆ 2 ಎನ್.ಡಿ.ಆರ್.ಎಪ್ ಹಾಗೂ 2 ಎಸ್.ಡಿ.ಆರ್.ಎಪ್ ತಂಡಗಳ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲು ಸೂಚಿಸಲಾಗಿದೆ. ಪ್ರವಾಹ ಬಂದಾಗ 5 ಲಕ್ಷ ಜನರನ್ನ ಸ್ಥಳಾಂತರ ಮಾಡಬೇಕಾಗುತ್ತದೆ ಹಾಗಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳು ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಮಹಾರಾಷ್ಟ್ರ ಜಲಾಶಯಗಳಿಂದ ಒಂದೆ ಬಾರಿಗೆ ನೀರು ಬಿಡುಗಡೆ ಮಾಡದಂತೆ ಮನವಿ ಮಾಡಲಾಗಿದೆ. ಇದಕ್ಕೆ ಮಹಾರಾಷ್ಟ್ರದ ಅಧಿಕಾರಿಗಳು ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎಂದು ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಉಪವಿಭಾಗಾಧಿಕಾರಿ ಯುಕೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ತಹಶೀಲ್ದಾರ ಅವರನ್ನ ತರಾಟೆಗೆ ತೆಗೆದುಕೊಂಡ ಡಿಸಿಎಂ ಕಾರಜೋಳ:
ಜನರ ಸಂಕಷ್ಟ ಆಲಿಸದ ಚಿಕ್ಕೋಡಿ ತಹಶೀಲ್ದಾರ ಅವರನ್ನ ಕಾರಜೋಳ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಭವನೀಯ ಪ್ರವಾಹ ನಿರ್ವಹಣೆ ಕುರಿತು ಕರೆದಿದ್ದ ಸಭೆಯಲ್ಲಿ ಕೊವಿಡ್ ನಿಭಾಯಿಸಲು ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲವಾದ ಹಿನ್ನೆಲೆಯಲ್ಲಿ ತಹಶೀಲ್ದಾರ ವಿರುದ್ದ ದೂರುಗಳ ಬಂದ ಕಾರಣ ಗರಂ ಆಗಿದ್ದಾರೆ.
ಚಿಕ್ಕೋಡಿ ತಹಶೀಲ್ದಾರ ಪ್ರವೀಣ ಜೈನ್ ಅವರನ್ನ ತರಾಟೆಗೆ ತೆಗೆದುಕೊಂಡರು. ಪ್ರವಾಹದ ಸಂದರ್ಭದಲ್ಲಿ ಸರಕಾರಿ ನೌಕರರಾಗಿ 24 ಗಂಟೆ ಕಾರ್ಯನಿರ್ವಹಿಸಬೇಕು ಜನರ ಹಾಗೂ ಪತ್ರಕರ್ತರ ಫೋನ್ ಕರೆ ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.