ಮೈಸೂರು: ಭೂ ಕಬಳಿಕೆ ಪ್ರಕರಣ ಸಂಬಂಧ ಕೊನೆಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶ ಜಾರಿಯಾಗಿದೆ.
ನಿರ್ಗಮಿತ ಡಿಸಿ ರೋಹಿಣಿ ಆದೇಶದಿಂದ ನಗರಾಭಿವೃದ್ಧಿ ಪ್ರಾಧಿಕಾರ ಎಚ್ಚೆತ್ತಿದ್ದು, ಮೂಡಾದಿಂದ ಇಂದು ಕೇರ್ಗಳ್ಳಿಯಲ್ಲಿ ಅನಧಿಕೃತ ಒತ್ತುವರಿ ತೆರವು ಮಾಡಲಾಗ್ತಿದೆ. ಕೇರ್ಗಳ್ಳಿ ಸರ್ವೆ ನಂಬರ್ 115ರಲ್ಲಿ ಒತ್ತುವರಿ ಆಗಿದೆ ಎನ್ನಲಾಗಿದ್ದು, ಆರ್ಟಿಸಿಯಲ್ಲಿ 61 ಎಕರೆ ಹೆಚ್ಚುವರಿಯಾಗಿ ಭೂಮಿ ದಾಖಲಾಗಿದೆ. ಆರ್.ಟಿ.ನಗರ ಬಡಾವಣೆ ಉದ್ದೇಶಕ್ಕಾಗಿ ಮೂಡಾ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಖಾಸಗಿಯವರು ಅನಧಿಕೃತವಾಗಿ ಅನುಭವದಲ್ಲಿರುವುದು ಪತ್ತೆಯಾಗಿದೆ.
ಹೀಗಾಗಿ ಭೂ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಂಡು, ಹೆಚ್ಚುವರಿಯಾಗಿ 61.18 ಎಕರೆ ವಿಸ್ತೀರ್ಣವನ್ನ ಆರ್.ಟಿ.ಸಿಯಿಂದ ರದ್ದುಪಡಿಸುವಂತೆ ಕೋರಲಾಗಿತ್ತು. ಅದ್ರಂತೆ ಕೆಲವು ಕ್ರಮಗಳನ್ನ ಸೂಚಿಸಿ ರೋಹಿಣಿ ಸಿಂಧೂರಿ ಆದೇಶಿಸಿದ್ದರು.
ಇಂದು ಸ್ಥಳ ತನಿಖೆಗೆ ತೆರಳುತ್ತಿರುವ ಮೂಡಾ ಅಧಿಕಾರಿಗಳು, ಹಕ್ಕು ಸಮರ್ಥಿಸುವ ನೈಜ ದಾಖಲೆ ಒದಗಿಸಲು ಭೂ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಈಗ ಭೂಗಳ್ಳರಲ್ಲಿ ನಡುಕ ಶುರುವಾಗಿದೆ.