ಗದಗ: ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಧನಸಹಾಯ ಪಡೆಯಲು ಗದಗನಲ್ಲಿ ಸಾವಿರಾರು ಆಟೋ ಚಾಲಕರು ಪರದಾಟ ನಡೆಸಿದ್ದಾರೆ. ಧನಸಹಾಯ ಪಡೆಯಲು ಸೇವಾ ಸಿಂಧು ಪೋರ್ಟಲ್ನಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ.
ಧನಸಹಾಯ ಪಡೆಯಲು ಅರ್ಜಿ ಹಾಕಿದರೆ ಅದು ಬ್ರ್ಯಾಡ್ಜ್ ಲೈಸೆನ್ಸ್ ಕೇಳ್ತಿದೆ. ಇದರಿಂದ ಜಿಲ್ಲಾಧಿಕಾರಿಗಳು ಬ್ರ್ಯಾಡ್ಜ್ ಲೈಸೆನ್ಸ್ ಪಡೆಯಲು ಎರಡು ದಿನಗಳ ಕಾಲ ಮಾತ್ರ ಅವಕಾಶ ಕೊಟ್ಟಿದ್ದರು. ಆದ್ರೆ ಎರಡು ದಿನದಲ್ಲಿ ಕೆಲವೇ ಕೆಲವು ಜನರಿಗೆ ಲೈಸೆನ್ಸ್ ಸಿಕ್ಕಿದೆ. ಈಗ ಕಾಲಾವಕಾಶ ಮುಗಿದಿದೆ ಅಂತ ಉಳಿದವರನ್ನ ವಾಪಸ್ ಕಳುಹಿಸುತ್ತಿದ್ದಾರೆ ಅಂತ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಗದಗ ತಾಲೂಕಿನ ಮಲ್ಲಸಮುದ್ರದ ಬಳಿ ಇರುವ ಆರ್.ಟಿ.ಓ ಕಚೇರಿ ಬಳಿ ಇಂದು ಸಾವಿರಾರು ಜನ ಆಟೋ ಚಾಲಕರು ಜಮಾಯಿಸಿದ್ದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಆಟೋ ಚಾಲಕರಿಗೆ ಬ್ರ್ಯಾಡ್ಜ್ ಲೈಸೆನ್ಸ್ ಅವಶ್ಯಕತೆ ಇರಲಿಲ್ಲ. ಈಗ ಸರ್ಕಾರದ ಮೂರು ಸಾವಿರ ರೂಪಾಯಿ ಧನಸಹಾಯ ಪಡೆಯಬೇಕಾದರೆ ಬ್ರ್ಯಾಡ್ಜ್ ಲೈಸೆನ್ಸ್ ಕೇಳಲಾಗ್ತಿದೆ. ಇಲ್ಲಿ ನೋಡಿದರೆ ಜಿಲ್ಲಾಧಿಕಾರಿಗಳು ಪುನಃ ಆದೇಶ ಮಾಡುವವರಿಗೆ ನಿಮಗೆ ಬ್ರ್ಯಾಡ್ಜ್ ಲೈಸೆನ್ಸ್ ಕೊಡೋದಿಲ್ಲ ಅಂತ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ.
ಗದಗನಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿದ್ದಾರೆ. ಈ ಸಮಸ್ಯೆಯಿಂದಾಗಿ ನಾವು ಸರ್ಕಾರ ಧನಸಹಾಯದಿಂದ ವಂಚಿತರಾಗುತ್ತಿದ್ದೇವೆ ಅಂತ ಚಿಂತೆಗೀಡಾಗಿದ್ದಾರೆ.