ನ್ಯೂಯಾರ್ಕ್: ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಆಕೆ ಮುಸ್ಲಿಮರನ್ನು ಸೆರೆಯಲ್ಲಿಡಲು ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲುಗಳನ್ನು ನಿರ್ಮಿಸಿರುವ ಕುರಿತು ತನಿಖಾ ವರದಿ ಪ್ರಕಟಿಸುವ ಮೂಲಕ ಚೀನಾದ ಕ್ರಮವನ್ನು ಜಗತ್ತಿಗೆ ತಿಳಿಸಿದ್ದು, ತನ್ನ ವಿನೂತನ ತನಿಖಾ ವರದಿಗಳ ಮೂಲಕ ಮೌಲ್ಯಯುತ ಸುದ್ದಿಗಳನ್ನು ಪ್ರಸ್ತುಪಡಿಸಿದ ಕಾರಣಕ್ಕಾಗಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಪತ್ರಿಕೋದ್ಯಮ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೇಘಾ ರಾಜಗೋಪಾಲನ್ ಅವರು ‘ಬಝ್ಫೀಡ್ ನ್ಯೂಸ್’ ಎಂಬ ಸುದ್ದಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಟಂಪಾ ಬೇ ಟೈಮ್ಸ್’ನ ವರದಿಗಾರರಾದ ನೀಲ್ ಬೇಡಿ ಹಾಗೂ ಕ್ಯಾಥ್ಲಿನ್ ಮ್ಯಾಕ್ಗ್ರೊರಿ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ರಹಸ್ಯವಾಗಿ ಜೈಲುಗಳನ್ನು ನಿರ್ಮಿಸಿ ಮತ್ತು ಸಾಮೂಹಿಕ ತಡೆ ಶಿಬಿರಗಳನ್ನು ಮಾಡಿ, ಅದರಲ್ಲಿ ಮಕ್ಕಳು ಸೇರಿದಂತೆ, ಲಕ್ಷಾಂತರ ಮುಸ್ಲಿಮರನ್ನು ಬಂಧಿಸಿಟ್ಟಿದ್ದ ವಿಚಾರವನ್ನು ಮೇಘಾ ರಾಜಗೋಪಾಲ್ ಅವರು ತಮ್ಮ ವಿಶಿಷ್ಟ ರೀತಿಯ ತನಿಖಾ ವರದಿಗಳ ಮೂಲಕ ಬಹಿರಂಗಪಡಿಸಿದ್ದರು.ಮೇಘಾ ಅವರು ಷಿನ್ಜಿಯಾಂಗ್ ಪ್ರಾಂತ್ಯದ ಸುದ್ದಿಗಳ ಸರಣಿಗಾಗಿ ‘ಅಂತರರಾಷ್ಟ್ರೀಯ ವರದಿ’ ವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.