ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕೇಸರಿ ದಾರ ಬರಿ ದಾರವಲ್ಲ, ಅದು ರಕ್ಷೆಯ ಪ್ರತೀಕ. ಅದರಲ್ಲಿ ಅಣ್ಣ ಸದಾಕಾಲ ನನ್ನನ್ನು ರಕ್ಷಿಸಬೇಕೆಂಬ ಆಶಯ ಅಡಗಿದೆ
ರಕ್ಷಾ ಬಂಧನವನ್ನು ಏಕೆ ಆಚರಿಸುತ್ತೇವೆ?
ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಕಂಡಬರುವ ವೈವಿಧ್ಯಮಯ ಆಚರಣೆಗಳಲ್ಲಿ ಈ ಹಬ್ಬವು ಕೂಡ ಒಂದು. ರಕ್ಷಾಬಂಧನ ಎಂದರೆ ಕೇಸರಿ ದಾರ ಕಟ್ಟಿ, ಉಡುಗೊರೆ ನೀಡುವುದಷ್ಟೆ ಅಲ್ಲ, ‘ಪ್ರೀತಿ,ಮಮತೆಯನ್ನು ತುಂಬಿ ನಾ ಬದುಕಿರುವ ತನಕ ನನ್ನ ಅಣ್ಣ ಖುಷಿಯಾಗಿರಬೇಕು, ಈ ರಕ್ಷೆ ಸದಾ ನನ್ನ ಅಣ್ಣನನ್ನು ರಕ್ಷಿಸಬೇಕು’ ಎಂಬ ಆಶಯದೊಂದಿಗೆ ತಂಗಿ ಪ್ರೀತಿಯಿಂದ ಕಟ್ಟುವ ರಕ್ಷೆ
ತಂಗಿಯಾದವಳಿಗೆ ಅಣ್ಣ ಕೇವಲ ಸಂಬಂಧವಲ್ಲ ಅಳುವಾಗ ಕಣ್ಣೊರೆಸುವ ಕೈಯಾಗುತ್ತಾನೆ, ನೊಂದಾಗ ಮಿಡಿಯುವ ಹೃದಯವಾಗುತ್ತಾನೆ, ರಕ್ಷಣೆಗೆ ಸದಾ ಸಿದ್ದವಿರುವ ಯೋಧನಾಗಿರುತ್ತಾನೆ, ಅಂತೆಯೇ ತಂಗಿ ಅಣ್ಣನಾದವನ ಪ್ರತಿ ಭಾವನೆಗೆ ಸ್ಪಂದಿಸುವ ಗೆಳತಿಯಾಗಿರುತ್ತಾಳೆ, ಆರೋಗ್ಯ ಕೆಟ್ಟಾಗ ಸೇವೆ ಮಾಡುವಸೇವಕಿಯಾಗಿರುತ್ತಾಳೆ. ಇದು ಕೇವಲ ರಕ್ಷೆಯ ಬಂಧನವಲ್ಲ ಮಧುರ ಪ್ರೀತಿಯ ಬಂಧನ
ಸಂಸ್ಕೃತಿಯ ಪ್ರತೀಕ ರಕ್ಷಾಬಂಧನವನ್ನು ಹೇಗೆ ಆಚರಿಸುತ್ತೇವೆ?
ಅಣ್ಣ ತಂಗಿಯ ಸಂಬಂಧ ಶುಭ್ರ ಪ್ರೀತಿಯ ಸಂಕೇತ. ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಇಬ್ಬರೂ ಬದ್ಧರಾಗಿರುತ್ತಾರೆ. ನಮ್ಮ ದೇಶದಲ್ಲಿ ಕಾಲಕ್ಕನುಗುಣವಾಗಿ ಆಚರಣೆ ಬದಲಾದರೂ ರಕ್ಷಾಬಂಧನ ಹಬ್ಬದ ಪ್ರಾಮುಖ್ಯತೆ ಮಾತ್ರ ಕಡಿಮೆಯಾಗಿಲ್ಲ
ಆ ದಿನ ಸಹೋದರಿ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಸೋದರನ ಆಶೀರ್ವಾದ ಪಡೆಯುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಈ ಹಬ್ಬ ದಟ್ಟಗೊಳಿಸುತ್ತದೆ. ಅಣ್ಣ ತಂಗಿಯರ ಭಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ
ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ಮನದಲ್ಲಿ ಮೂಡಿಸುತ್ತದೆ.
ಸಹೋದರ- ಸಹೋದರಿಯರ ನಢುವಿನ ಭ್ರಾತೃತ್ವದ ನಂಟನ್ನು ಗಟ್ಟಿಗೊಳಿಸುವ ಈ ಆಚರಣೆ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವೂ ಹೌದು
ಜನ್ಮಜನ್ಮಕೂ ಇವನೇ ನನ್ನ ಅಣ್ಣನಾಗಲಿ, ಇವಳೇ ನನ್ನ ತಂಗಿಯಾಗಲಿ ಎಂಬ ಹಾರೈಕೆಯೊಂದಿಗೆ ಹಬ್ಬ ಆಚರಿಸುತ್ತಿರುವ ಎಲ್ಲಾ ಅಣ್ಣ ತಂಗಿಯರಿಗೂ ನಮ್ಮ ಲಕ್ಷ್ಮಿ ನ್ಯೂಸ್ ವಾಹಿನಿ ಕಡೆಯಿಂದ ರಕ್ಷಾಬಂಧನದ ಶುಭಾಶಯಗಳು