ಚಿತ್ರದುರ್ಗ: ಮನೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಆ ಮಹಿಳೆ ಚಿರತೆಯೊಂದಿಗೆ ಕಾದಾಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಈ ರೋಚಕ ಘಟನೆ ಬಗ್ಗೆ ಗೊತ್ತಾದ ಬಳಿಕ ಗ್ರಾಮದ ಜನರು ಮಹಿಳೆಯ ಚಾಣಾಕ್ಷತನ ಮತ್ತು ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆಗಿದ್ದೇನು?
ಲಕ್ಷ್ಮೀಬಾಯಿ(45) ಚಿರತೆಯೊಂದಿಗೆ ಕಾದಾಡಿ ಗಾಯಗೊಂಡ ಮಹಿಳೆ. ನಿನ್ನೆ ಬೆಳಗಿನ ಜಾವ ನಡೆದಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ನಿನ್ನೆ ಮುಂಜಾನೆ ಮನೆಯಲ್ಲಿ ಮಲಗಿದ್ದ ವೇಳೆ ಏಕಾಏಕಿ ಚಿರತೆ ಲಕ್ಷ್ಮೀಬಾಯಿ ಅವರ ಮನೆಗೆ ನುಗ್ಗಿದೆ. ಈ ವೇಳೆ ಅದು ಮನೆಯ ನಾಯಿ ಎಂದು ತಿಳಿದು ಏ.. ಛೂ.. ಅಂತ ಲಕ್ಷ್ಮೀಬಾಯಿ ಗದರಿಸಿದ್ರು ಎನ್ನಲಾಗಿದೆ. ಆಗ ಚಿರತೆ ಅವರ ಕೈಯನ್ನು ಕಚ್ಚಿದೆ. ಗಾಬರಿಯಿಂದ ಲಕ್ಷ್ಮೀಬಾಯಿ ಎದ್ದು ನೋಡಿದಾಗ ಚಿರತೆ ಅನ್ನೋದು ಗೊತ್ತಾಗಿದೆ.
ಚಿರತೆ ಸ್ವಲ್ಪ ದೂರ ತಮ್ಮನ್ನ ಎಳೆದೊಯ್ದರು ಲಕ್ಷ್ಮೀಬಾಯಿ ಧೃತಿಗೆಡದೆ ಹೋರಾಟ ಮಾಡಿದ್ದಾರೆ. ಕೂಡಲೇ ತಮ್ಮ ಮೇಲೆ ಎರಗಿದ ಚಿರತೆಯ ಬಾಯಿಗೆ ತಲೆದಿಂಬು ಹಾಕಿದ್ದಾರೆ. ಬಲಗೈಯಲ್ಲಿದ್ದ ತಲೆದಿಂಬನ್ನ ಚಿರತೆ ಬಾಯಿಗೆ ತುರುಕಿ, ಜೋರಾಗಿ ಕುರುಚಿದ್ರಂತೆ. ಇದರಿಂದ ಗಾಬರಿಗೊಂಡ ಚಿರತೆ ಸ್ಥಳದಿಂದ ಓಡಿಹೋಯಿತು ಎನ್ನಲಾಗಿದೆ.
ಘಟನೆಯಲ್ಲಿ ಲಕ್ಷ್ಮೀಬಾಯಿ ಅವರ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದೆ. ಅವರನ್ನ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.