ಉಡುಪಿ: ಪುತ್ರ ಹಾಗೂ ಪ್ರಿಯಕರನ ಜೊತೆಗೂಡಿ ಪತಿಯನ್ನು ಹೋಮಕುಂಡದಲ್ಲಿ ಹಾಕಿ ಸುಟ್ಟು ಕೊಲೆ ಮಾಡಿದ್ದ ಪ್ರಕರಣ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಮುಂದೂಡಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇರುವುದರಿಂದ ಕುತೂಹಲ ಮೂಡಿಸಿದೆ.
ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಕೊಲೆ ಮಾಡಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ, ಪ್ರಿಯಕರ ನಿರಂಜನ್ ಭಟ್, ಪುತ್ರ ನವನೀತ್ ಶೆಟ್ಟಿ ಪ್ರಮುಖ ಆರೋಪಿಗಳು. 2016ರ ಜುಲೈ ತಿಂಗಳಲ್ಲಿ ಈ ಭೀಕರ ಕೊಲೆ ನಡೆದಿತ್ತು. ಭಾಸ್ಕರ ಶೆಟ್ಟಿ ದುಬೈನಲ್ಲಿ ಬಹುಕೋಟಿ ರೂಪಾಯಿ ಉದ್ಯಮಿಯಾಗಿದ್ದರು. ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಗೆ ಒಂದು ದಿನ ಆಗಮಿಸಿದ್ದಾಗ ಅವರು ಪತ್ನಿಯ ಮೊಬೈಲ್ಫೋನ್ನಲ್ಲಿ ಆಕೆ ಪ್ರಿಯಕರನೊಂದಿಗೆ ಅಶ್ಲೀಲ ಭಂಗಿಯಲ್ಲಿ ಇರುವುದನ್ನು ಗಮನಿಸಿದ್ದರು. ಹೀಗಾಗಿ ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿಗೆ ನೋಂದಣಿ ಮಾಡಿಸಲು ಭಾಸ್ಕರ ಶೆಟ್ಟಿ ಮುಂದಾಗಿದ್ದರು. ಇದಕ್ಕಾಗಿ ಪತಿ ವಕೀಲರ ಬಳಿ ಹೋಗಲಿರುವುದನ್ನು ತಿಳಿದ ಪತ್ನಿ ರಾಜೇಶ್ವರಿ ಪ್ರಿಯಕರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.
ಪುತ್ರ ನವನೀತ್ ಜತೆ ಸೇರಿ ಮನೆಯಲ್ಲೇ ಪತಿಯನ್ನು ಅರೆಜೀವಗೊಳಿಸಿ ನಂತರ ಕಾರಿನಲ್ಲಿ ನಂದಳಿಕೆಯಲ್ಲಿನ ಪ್ರಿಯಕರನ ಮನೆಗೆ ತಂದಿದ್ದಳು. ಅಲ್ಲಿ ಹೋಮಕುಂಡ ನಿರ್ಮಿಸಿ, ಪತಿಯ ದೇಹವನ್ನು ಅದಕ್ಕೆ ಹಾಕಿ ಸುಟ್ಟು ಪೂರ್ತಿಯಾಗಿ ಸಾಯಿಸಲಾಗಿತ್ತು. ಬಳಿಕ ಎಲುಬು ಹಾಗೂ ಭಸ್ಮವನ್ನು ಹತ್ತಿರದ ನದಿಗೆ ಎಸೆದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಅವರು ಜೂ. 8ಕ್ಕೆ ಮುಂದೂಡಿದ್ದಾರೆ. ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಹಾಗೂ ಸಾಕ್ಷ್ಯನಾಶ ಆರೋಪಿ ರಾಘವೇಂದ್ರ ಅವರು ಜೂ.8ಕ್ಕೆ ಹಾಜರಾಗುವಂತೆ ಹಾಗೂ ಜೈಲಿನಲ್ಲಿರುವ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.