Breaking News
Home / ರಾಜ್ಯ / ಏರ್ ಸ್ಪ್ರೇ ಅಸ್ತ್ರ- ಲಘು ವಿಮಾನದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಏರ್ ಸ್ಪ್ರೇ ಅಸ್ತ್ರ- ಲಘು ವಿಮಾನದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

Spread the love

ಬೆಂಗಳೂರು: ಗಾಳಿಯಲ್ಲಿ ಅಲ್ಪ ಕಾಲ ತೇಲುವ ಕೊರೊನಾ ವೈರಸ್ ನಾಶಕ್ಕೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ ಸೋಂಕು ನಿವಾರಕ ದ್ರಾವಣವನ್ನು ವಿಮಾನದ ಮೂಲಕ ಸಿಂಪಡಣೆ ಮಾಡಲು ಪ್ಲಾನ್ ಮಾಡಿದೆ. ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಪಡಿಸುವ ಏರಿಯಲ್ ವರ್ಕ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆ ಯೋಜನೆಗೆ ಇಂದು ಚಾಲನೆ ಕೊಡಲಾಗಿದೆ. ವಿದೇಶಗಳಂತೆ ಬೆಂಗಳೂರಿನಲ್ಲಿ ಕೂಡ ಲಘು ವಿಮಾನದ ಮೂಲಕ ಸಾಂಕ್ರಾಮಿಕ ಔಷಧಿ ಸಿಂಪಡಣೆ ಮಾಡಲಾಗುತ್ತದೆ. ದೇಶದಲ್ಲೇ ಇದು ಮೊದಲ ವಿನೂತನ ಪ್ರಯತ್ನವಾಗಿದೆ.

ನಗರದ ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ ಮತ್ತು ಶಿವಾಜಿನಗರ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಮೂರು ದಿನಗಳ ಕಾಲ ಏರ್ ಸ್ಪ್ರೇ ಮಾಡಲಾಗುತ್ತದೆ. ಸಾವಯವ ಸೋಂಕು ನಿವಾರಕವನ್ನು ವಿಮಾನದ ಮೂಲಕ ಸಿಂಪಡಣೆ ಮಾಡಲಾಗುತ್ತದೆ. ಇದಕ್ಕೆ ಸರ್ಕಾರ ಯಾವುದೇ ಹಣ ನೀಡುತ್ತಿಲ್ಲ. ಕಂಪನಿಯವರೇ ಉಚಿತವಾಗಿ ಸಿಂಪಡಣೆ ಮಾಡುತ್ತಿದ್ದಾರೆ.

ಮಾರುಕಟ್ಟೆ ಸ್ಥಳಗಳಲ್ಲಿ ಬೆಳಗ್ಗೆ 8 ರಿಂದ 10 ಗಂಟೆ ಸಮಯದಲ್ಲಿ ಸೋಮವಾರದಿಂದ ಮೂರು ದಿನ ಸಿಂಪಡಣೆ ಮಾಡಲಾಗುತ್ತದೆ. ಸೋಂಕು ನಿವಾರಕ ದ್ರಾವಣ ಆರ್ಗಾನಿಕ್ ಆಗಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಪ್ರಾಯೋಗಿಕವಾಗಿ ಮಾಡಲಿದ್ದು, ಇದರ ಸಾಧಕ ಬಾಧಕ ನೋಡಿಕೊಂಡು ಬೇರೆ ಕಡೆ ಕೂಡ ಸಿಂಪಡಣೆ ಮಾಡಲಾಗುತ್ತದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಜೈವಿಕ ಸೋಂಕು ನಿವಾರಕವನ್ನು ವಿಮಾನದ ಮೂಲಕ ಸಿಂಡಪಣೆ ಮಾಡುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಏರಿಯಲ್ ವರ್ಕ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆ ಮೂರು ದಿನಗಳ ಕಾಲ ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ವಿಮಾನದ ಮೂಲಕ ಸಿಂಪಡಣೆ ಮಾಡಲಿದೆ ಎಂದರು.

 

ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಪಡನೆ ಮಾಡುವ ಕಾರ್ಯ ಸಫಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ಮುಂದುವರಿಸಲಾಗುವುದು. ಸೋಮವಾರದಿಂದ ನಗರದ ಶಿವಾಜಿನಗರ, ಕೆ.ಆರ್.ಮಾರುಕಟ್ಟೆ ಪ್ರದೇಶಗಳಲ್ಲಿ ಸಿಂಪಡನೆ ನಡೆಯಲಿದೆ ಎಂದು ಹೇಳಿದರು.

ಏರಿಯಲ್‍ ವರ್ಕ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆಯ ಮುಖ್ಯಸ್ಥ ಕ್ಯಾಪ್ಟನ್ ಮುರಳಿ ರಾಮಕೃಷ್ಣನ್ ಮಾತನಾಡಿ, ಅಮೆರಿಕ ಹಾಗೂ ಆಫ್ರಿಕಾ ದೇಶಗಳಲ್ಲಿ ವೈಮಾನಿಕ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯದಲ್ಲಿ ವಿಶೇಷ ಪರಿಣಿತಿಯನ್ನ ಹೊಂದಿರುವ ತಂಡ ಬೆಂಗಳೂರು ನಗರದಲ್ಲಿ ಈ ಕಾರ್ಯಚರಣೆಯನ್ನು ಪ್ರಾಯೋಗಿಕವಾಗಿ ನಡೆಸಲಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ವೈಮಾನಿಕವಾಗಿ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯವನ್ನು ನಡೆಸಲಾಗುವುದು. ಗಾಳಿಯಲ್ಲಿರುವ ಕೋವಿಡ್ ವೈರಾಣುವನ್ನು ಸಾಯಿಸುವಷ್ಟು ಸಮಯ ಗಾಳಿಯಲ್ಲಿ ಸೋಂಕು ನಿವಾರಣ ದ್ರಾವಣ ಸಿಂಪಡಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸಂಸ್ಥೆ ಸಿದ್ಧಗೊಳಿಸಿದೆ. ಸೂಕ್ಷ್ಮ ಮೈಕ್ರಾನ್ ಕಣಗಳ ಸಾಂದ್ರತೆಯಲ್ಲಿರುವ ಜೈವಿಕ ಸೋಂಕು ನಿವಾರಣಾ ದ್ರಾವಣ ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ಕೊಲ್ಲಲಿದೆ. ಮೂರು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಈ ವೈಮಾನಿಕ ಸಿಂಪಡಣೆಯನ್ನು ಮಾಡಲು ಸರ್ಕಾರದ ಸಂಸ್ಥೆಗಳಿಂದ ಅಗತ್ಯ ಅನುಮತಿಗಳನ್ನು ಏರಿಯಲ್‍ವಕ್ರ್ಸ್ ಏರೋ ಎಲ್‍ಎಲ್‍ಪಿ ಸಂಸ್ಥೆ ಪಡೆದುಕೊಂಡಿದೆ ಎಂದು ಹೇಳಿದರು.

ವಿಮಾನದ ವಿಶೇಷತೆಗಳು
300 ಲೀಟರ್ ಗಳಷ್ಟು ಸೋಂಕು ನಿವಾರಣಾ ದ್ರಾವಣವನ್ನು ಹೊತ್ತೊಯ್ಯಬಲ್ಲ ಅಮೆರಿಕನ್ ಚಾಂಪಿಯನ್ ಸ್ಕೌಟ್ ಹೆಸರಿನ ವಿಮಾನ ಇದು. ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಒಂದು ಗಂಟೆಯಲ್ಲಿ 300 ಹೆಕ್ಟೇರ್‍ನಷ್ಟು ಪ್ರದೇಶದಲ್ಲಿ ಸಿಂಪಡಣೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಯುಎಲ್‍ವಿ ಸ್ಪ್ರೇಯರ್ ಮೂಲಕ ಸಿಪಿ ನಾಜಲ್ ಗಳನ್ನು ಬಳಸಿ 100 ಮೈಕ್ರಾನ್‍ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಿಂಪಡಣೆ ಮಾಡಲಿದೆ. ಸದ್ಯ ಬೆಂಗಳೂರಿನಲ್ಲಿ 1,000 ಅಡಿ ಎತ್ತರದಿಂದ ದ್ರಾವಣ ಸಿಂಪಡಿಸಲಾಗುತ್ತದೆ. ರಾಸಾಯನಿಕ ಮುಕ್ತ ಮತ್ತು ಸಾವಯವ ದ್ರಾವಣವಾಗಿದ್ದು, ಮನುಷ್ಯರ ಮೇಲೆ ಬಿದ್ದರೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಎರಡು ರೀತಿಯ ದ್ರಾವಣ ಬಳಕೆ
1. ಏರ್‍ಲೆನ್ಸ್ ಮೈನಸ್ ಕೊರೊನಾ: ಇದು ರಾಸಾಯನಿಕ ರಹಿತ ಮಾನವ ಸ್ನೇಹಿ ಹಾಗೂ ಪರಿಣಾಮಕಾರಿಯಾದ ಸ್ಯಾನಿಟೈಸೇಷನ್ ಸಿಸ್ಟಮ್ ಆಗಿದೆ. ಕೇವಲ ನಲ್ಲಿಯ ನೀರು ಮತ್ತು ವಿದ್ಯುತ್‍ಶಕ್ತಿಯನ್ನು ಬಳಸಿಕೊಂಡು ತಯಾರಿಸಲಾಗುವ ಸೋಂಕು ನಿವಾರಣಾ ದ್ರಾವಣವನ್ನು ಸಾರ್ವಜನಿಕ ಸ್ಥಳ, ಕಚೇರಿ, ಆಸ್ಪತ್ರೆ ಮತ್ತು ಮನೆಗಳಲ್ಲಿ ಬಳಸಬಹುದಾಗಿದೆ. ಪೆರ್‍ಸಾಪಿಎನ್ ಇನ್ನೊವೇಷನ್ಸ್ ಸಂಸ್ಥೆಯಿಂದ ಕಂಡುಹಿಡಿಯಲಾಗಿರುವ ಈ ನೂತನ ತಂತ್ರಜ್ಞಾನವನ್ನು, ಸ್ಟಾನ್‍ಫೋರ್ಡ್ ಯೂನಿವರ್ಸಿಟಿ, ಐಐಟಿ ಮತ್ತು ಎಐಐಎಂಎಸ್ ನಿಂದ ಇಂಜಿನಿಯರ್ ಮತ್ತು ವಿಜ್ಞಾನಿಗಳ ತಂಡ ಪರೀಕ್ಷಿಸಿದ್ದು, ಐಸಿಎಂಆರ್ ನಿಂದ ಧೃಢಪಟ್ಟಿದೆ. ಈ ನೂತನ ತಂತ್ರಜ್ಞಾನ ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಪ್ಯಾಥೋಜೀನ್ಸ್‍ಗಳ ವಿರುದ್ಧ ಬಹಳ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ.

2. ಶುಗರಾಧಾನ ಜೈವಿಕ ಆಂಟಿಮೈಕ್ರೋಬಿಯಲ್ ಕಾನ್ಸನ್‍ಟ್ರೇಟ್(Sugaradhana Organic Antimicrobial concentrate): ಈ ಸೋಂಕು ನಿವಾರಕ ದ್ರಾವಣವನ್ನು ನಮ್ಮ ಪ್ರಾಚೀನ ಆರೋಗ್ಯ ಪದ್ಧತಿಯಾದ ಆಯುರ್ವೇದದ ಅಂಶಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದು ಲ್ಯಾಬ್‍ಗಳಲ್ಲಿ ಮತ್ತು ಹೊರಾಂಗಣಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ವೈರಾಣುಗಳ ವಿರುದ್ಧ ಪರಿಣಾಕಾರಿಯಾದ ಫಲಿತಾಂಶ ನೀಡುತ್ತದೆ. ಈ ಜೈವಿಕ ಸೋಂಕು ನಿವಾರಣಾ ದ್ರಾವಣ ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ಬೀರದ ಶೇ.100 ರಷ್ಟು ಸುರಕ್ಷಿತವಾಗಿದೆ. ಇದು ಗಾಳಿಯಲ್ಲಿ ಮಾಲಿನ್ಯ ಹರಡುವುದನ್ನ ಕಡಿಮೆ ಮಾಡುತ್ತದೆ. ಈ ದ್ರಾವಣ ಸಿಂಪಡಣೆ ಮಾಡಿರುವ ಪ್ರದೇಶದಲ್ಲಿ ಕರೊನಾ ವೈರಾಣುವನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ದ್ರಾವಣವನ್ನು ಡಾ.ಕಾರ್ತಿಕ್ ನಾರಾಯಣನ್ ಅವರು ನಿರ್ಮಿಸಿದ್ದಾರೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡ ಈ ಪ್ರಾಯೋಗಿಕ ಯೋಜನೆಯ ಕಾರ್ಯದ ಮೇಲುಸ್ತುವಾರಿ ವಹಿಸಲಿದೆ. ಮೂರು ದಿನಗಳ ಪ್ರಾಯೋಗಿಕ ಕಾರ್ಯಾಚರಣೆಯ ನಂತರ ಅದರಿಂದಾದ ಪ್ರಯೋಜನ ಹಾಗೂ ಪರಿಮಾಣಗಳನ್ನು ತಿಳಿಸಲಿದೆ. ಮೂರು ದಿನ ಪೈಲೆಟ್ ಪ್ರಾಜೆಕ್ಟ್ ನ ಫಲಿತಾಂಶ ಆಧರಿಸಿ ಈ ವಿಧಾನದ ಅಳವಡಿಕೆ ಬಗ್ಗೆ ಸರ್ಕಾರ ನಿರ್ಧರಿಸಲಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ