ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಪ್ತ ಸಚಿವರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಹಲವುಬಾರಿ ನಾಯಕತ್ವ ಬದಲಾವಣೆ ಬಗ್ಗೆ ಮಾತು ಕೇಳಿಬಂದರೂ ಅದಾವುದಕ್ಕೂ ಕಿವಿಗೊಡದ ಸಿಎಂ, ಈ ಬಾರಿ ಸ್ವತಃ ಬೇಸರ ವ್ಯಕ್ತಪಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸ್ಥಾನಕ್ಕೆ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಪ್ರತಿನಿತ್ಯ ನನ್ನ ಬಳಿ ಬರುವವರ ಹೆಸರೇ ಕೇಳಿಬರುತ್ತಿದ್ದು, ಅವರು ಯಾವಾಗೂ ಜತೆಯಲ್ಲಿಯೇ ಇರುವವರಾಗಿದ್ದಾರೆ. ಅವರ ಹೆಸರು ಚರ್ಚೆಯಲ್ಲಿರುವುದು ವಿಪರ್ಯಾಸ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಸಚಿವರ ಬಳಿ ಚರ್ಚೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಜೂನ್ 7ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಹೈಕಮಾಂಡ್ ಸೂಚನೆ ಮೇರೆಗೆ ಸಭೆ ನಿಗದಿಯಾಗಿದೆ. ಆದರೆ ಈ ಬಗ್ಗೆ ಆಡಳಿತ ಪಕ್ಷದ ಮುಖ್ಯಸಚೇತಕರಿಗೂ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ.