ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೂ (ಬಿಟಿಪಿಎಸ್) ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ.
ಕೇಂದ್ರದಲ್ಲಿನ ಮೂರು ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಶೇ.50ರಷ್ಟುಸಿಬ್ಬಂದಿ ಕೆಲಸ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆಹೊರಡಿಸಿದ್ದರೂ ಮೇಲಧಿಕಾರಿಗಳುಜಾರಿಗೊಳಿಸದಿರುವುದು ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕಿನ ಆತಂಕ ದಿನೇದಿನೆ ಹೆಚ್ಚುತ್ತಿದೆ. ಕೇಂದ್ರದ ವಿವಿಧ ಘಟಕಗಳಲ್ಲಿ ಕರ್ತವ್ಯನಿರ್ವಹಿಸುವ 60ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ ಸೋಂಕು ಆವರಿಸಿದೆ. ಕೆಲವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳು ಸೇರಿ ರಾಜ್ಯಾದ್ಯಂತಕೋವಿಡ್ ಸೋಂಕಿನ ಎರಡನೇ ಅಲೆಯ ಅಬ್ಬರ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಸೇರಿ ಎಲ್ಲ ಇಲಾಖೆಗಳಿಗೂ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ರೊಟೇಷನ್ ಪದ್ಧತಿಯಲ್ಲಿ ಕೆಲಸ ಪಡೆಯುವಂತೆ ಸುತ್ತೋಲೆ ಹೊರಡಿಸಿದೆ