ಬೆಂಗಳೂರು, ಮೇ 19; ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆಟೋ, ಕ್ಯಾಬ್ ಚಾಲಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದರು. ವಿವಿಧ ವರ್ಗದ ಜನರಿಗೆ ಸಹಾಯಕವಗುವಂತೆ ಪ್ಯಾಕೇಜ್ ಘೋಷಣೆ ಮಾಡಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ.
ಸಾರಿಗೆ ಇಲಾಖೆಗೆ ಒಟ್ಟು 63 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದರ ಅನ್ವಯ ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ರೂ. 3000 ಸಾವಿರ ರೂ. ಸಹಾಯಧನ ಸಿಗಲಿದೆ. ಚಾಲಕರು ಲೈಸೆನ್ಸ್ ಮತ್ತು ನೋಂದಣಿ ಮಾಡಿಸಿರಬೇಕು. ಇದರ ಅನ್ವಯ ಸುಮಾರು 2.10 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
ಕಾರ್ಮಿಕ ಇಲಾಖೆಗೆ 494 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ. ಸಹಾಯಧನ ಸಿಗಲಿದೆ. ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮುಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿರಬೇಕು.
ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ 2000 ರೂ. ಸಹಾಯಧನ ಸಿಗಲಿದೆ. ಕ್ಷೌರಿಕರು, ಅಗಸಗರು, ಟೈಲರ್, ಹಮಾಲಿ, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಗಲಿಗರು, ಮೆಕಾನಿಕ್ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು ಇದರ ವ್ಯಾಪ್ತಿಯಲ್ಲಿ ಬರಲಿದ್ದು, ಇದರ ಅಡಿ ಒಟ್ಟು 2.20 ಲಕ್ಷ ಫಲಾನುಭವಿಗಳು ಬರಲಿದ್ದಾರೆ.