ತಿಪಟೂರು: ನಿರ್ಗತಿಕರಿಗೆ, ಕೋವಿಡ್ ವಾರಿಯರ್ಸ್ಗಳಿಗೆ ಊಟ ವಿತರಣೆ ಮಾಡುವಾಗ ಮಾರ್ಗಸೂಚಿ ಉಲ್ಲಂಘನೆ ವಿಚಾರವಾಗಿ ಬಿಜೆಪಿ ಮುಖಂಡ ಲೋಕೇಶ್ವರ್ ಹಾಗೂ ಡಿವೈಎಸ್ಪಿ ನಡುವೆ ಮಾತಿನ ಚಕಮಕಿ ನಡೆದಿದೆ.
ಲಾಕ್ಡೌನ್ ಆರಂಭವಾದಾಗಿನಿಂದ ಲೋಕೇಶ್ವರ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಿದ್ದಾರೆ. ಅದರಂತೆ ಶನಿವಾರವೂ ಆಹಾರ ವಿತರಣೆ ತೆರಳಿದ್ದಾಗ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪೊಲೀಸರು ಯುವಕರ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ನಡೆದ ಕೆಲ ಗಂಟೆಗಳ ನಂತರ ಡಿವೈಎಸ್ಪಿ ಚಂದನ್ ಕುಮಾರ್ ಎನ್., ಕಲ್ಲೇಶ್ವರ ದೇವಾಲಯದ ಬಳಿ ಉಚಿತ ಆಹಾರ ಸಿದ್ಧವಾಗುವ ಸ್ಥಳಕ್ಕೆ ತೆರಳಿ ಲಾಕ್ಡೌನ್ ಸಂದರ್ಭದಲ್ಲಿ ಇಷ್ಟೊಂದು ಜನ ಇರುವಂತಿಲ್ಲ ಎಂದಿದ್ದಾರೆ. ಆಗ ಲೋಕೇಶ್ವರ್ ಪ್ರತಿಕ್ರಿಯಿಸಿ ನಿರ್ಗತಿಕರಿಗೆ ಆಹಾರ ವಿತರಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗೆ ಮಾತುಕತೆ ಪ್ರಾರಂಭವಾಗಿದ್ದು ಅನೇಕ ವಿಚಾರಗಳ ಪ್ರಸ್ತಾಪದವರೆಗೂ ತಲುಪಿ ಮಾತಿನ ಚಕಮಕಿ ನಡೆದಿದೆ.
‘ಸೇವೆ ಮಾಡುವ ಯುವಕರಿಗೆ ತೊಂದರೆ ಕೊಡುವುದು, ಆರೋಗ್ಯ ತಪಾಸಣೆಗೆ ಬಂದವರ ಮೇಲೆ ದೌರ್ಜನ್ಯ ತೋರಿಸುವ ಬದಲು ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಮಾರ್ಗಸೂಚಿ ಜೊತೆಗೆ ಪೊಲೀಸರು ಮಾನವೀಯತೆ ಹೊಂದುವ ಅಗತ್ಯವಿದೆ’ ಎಂದು ಲೋಕೇಶ್ವರ್ ಹೇಳಿದ್ದಾರೆ.
ಡಿವೈಎಸ್ಪಿ ಚಂದನ್ ಕುಮಾರ್.ಪ್ರತಿಕ್ರಿಯಿಸಿ, ‘ಕಾನೂನಿನ ಅನ್ವಯ ಎಲ್ಲ ರೀತಿಯ ಸಹಾಯಕ್ಕೂ ಸಿದ್ಧರಿದ್ದೇವೆ. ಜಿಲ್ಲಾ ಪಂಚಾಯತಿ ಸಿಇಒ ಅಥವಾ ತಾಲ್ಲೂಕು ಆಡಳಿತದಿಂದ ಸೇವೆ ಮಾಡುವ ಬಗ್ಗೆ ಮಾಹಿತಿ ನೀಡಿ ಅನುಮೋದನೆ ಪಡೆದರೆ ಅಗತ್ಯವಿರುವ 10ರಿಂದ 15 ಮಂದಿಗೆ ಅವಕಾಶ ಕಲ್ಪಿಸ ಬಹುದು. ರಾಜಕಾರಣಿಗಳ, ಮುಖಂ ಡರ ಹೆಸರು ಹೇಳಿಕೊಂಡು ಎಲ್ಲರೂ ಓಡಾಡಿದರೆ ಸರ್ಕಾರದ ಮಾರ್ಗಸೂಚಿ ಪಾಲನೆ ಹೇಗೆ ಸಾಧ್ಯ’ ಎಂದರು.