ಕೊಪ್ಪಳ: ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ನರೇಗಲ್ ಗ್ರಾಮದ ಲಕ್ಷ್ಮೀ ಪೂಜಾರ ಅವರು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ಚೆಕಪ್ ಗೆ ಹೋಗಬೇಕಿತ್ತು. ಆದರೆ ಪೊಲೀಸರು ಎಲ್ಲ ವಾಹನಗಳನ್ನ ಹಿಡಿದು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ವಾಹನ ಚಾಲಕರು ಪೊಲೀಸರಿಗೆ ಹೆದರಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆ ತರಲು ನಿರಾಕರಿಸಿದ್ದರು. ಇದರಿಂದ ಗ್ರಾಮದಿಂದ 7 ಕಿಮೀ ಕಾಲ್ನಡಿಗೆಯಲ್ಲೆ ಕೊಪ್ಪಳಕ್ಕೆ ಆಗಮಿಸಿದ್ದ ಗರ್ಭಿಣಿಯು ನಗರದಲ್ಲೂ ಹೆದ್ದಾರಿ ರಸ್ತೆಯ ಮೂಲಕ ಖಾಸಗಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲೆ ತೆರಳುತ್ತಿದ್ದರು. ಆಸ್ಪತ್ರೆಗೆ ತೆರಳಲು ಪರದಾಡಿದರು.
ಇದನ್ನು ಮನಗಂಡ ಮಾಧ್ಯಮ ಮಿತ್ರರು ಕೂಡಲೇ ಅವರಿಗೆ ಕಾರಿನ ವ್ಯವಸ್ಥೆ ಮಾಡಿ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದರು.