ಬೆಂಗಳೂರು: ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಎರಡನೇ ಅಲೆಯನ್ನ ನಿಯಂತ್ರಣಕ್ಕೆ ತರಲು ಲಾಕ್ಡೌನ್ ವಿಧಿಸಲಾಗಿದೆ. ಈ ಹಿನ್ನಲೆ ಇಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪುಲಿಕೇಶಿನಗರದ ಬಡ ಜನರಿಗೆ ಉಚಿತ ದಿನಸಿ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ದಿನಸಿ ಸಾಮಗ್ರಿಗಳನ್ನ ಹಂಚಿದರು. ಈ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಡವರಿಗೆ ಉಚಿತ ದಿನಸಿ ಕೊಡ್ತಿದ್ದಾರೆ. ಲಾಕ್ಡೌನ್ ಇರೋದ್ರಿಂದ ಬಡವರು ಹಸಿವಿನಿಂದ ಇರಬಾರದು ಅಂತ ಉಚಿತ ದಿನಸಿ ಕೊಡ್ತಿದ್ದಾರೆ. ಮನೆಮನೆಗೇ ಉಚಿತ ದಿನಸಿ ಕಳಿಸ್ತಿದ್ದಾರೆ ಎಂದರು. ಇನ್ನು ರಾಜ್ಯದಲ್ಲಿ ಟೋಟಲ್ ಲಾಕ್ಡೌನ್ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ರು. ಸೋಂಕಿತರ ಸಂಖ್ಯೆ ಪ್ರತಿನಿತ್ಯ 50 ಸಾವಿರದ ಆಸುಪಾಸಿನಲ್ಲಿದೆ. ಹೀಗಾಗಿ ಟೋಟಲ್ ಎರಡು ವಾರಗಳ ಕಾಲ ಟೋಟಲ್ ಲಾಕ್ಡೌನ್ ಮಾಡಬೇಕು. ಅದರಿಂದ ಕೊರೊನಾ ಸರಪಳಿ ತುಂಡರಿಸಬಹುದು. ನನ್ನ ಅಭಿಪ್ರಾಯದ ಪ್ರಕಾರ ಸೋಂಕಿತರ ಸಂಖ್ಯೆ ಕಡಿಮೆ ಆಗಬೇಕು ಅಂದರೆ ಟೋಟಲ್ ಲಾಕ್ಡೌನ್ ಮಾಡಲೇಬೇಕು ಎಂದರು.