ಚಾಮರಾಜನಗರ: ಕಳೆದ ಸೋಮವಾರ ಒಂದೇ ದಿನ ಆಕ್ಸಿಜನ್ ಕೊರತೆಯಿಂದ ೨೪ ಜನ ಸೋಂಕಿತರು ಮೃತಪಟ್ಟು ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿದ್ದ ಚಾಮರಾಜನಗರ ಜಿಲ್ಲಸ್ಪತ್ರೆಯಿಂದ ಇಂದು ಮತ್ತೊಂದು ಕಳವಳದ ಸುದ್ದಿ ಹೊರ ಬಿದ್ದಿದೆ. ಈ ಆಸ್ಪತ್ರೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸದ್ಯ 4,186 ಮಂದಿ ಕೊರೊನಾ ಸೋಂಕಿತರು ಇದ್ದಾರೆ. ಇವರಲ್ಲಿ 50 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಕೋವಿಡ್ನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಮೃತಪಟ್ಟವರಲ್ಲಿ ಕೊಳ್ಳೇಗಾಲ ಪಟ್ಟಣದ 45 ವರ್ಷದ ಮಹಿಳೆ, 64 ವರ್ಷದ ಮಹಿಳೆ, 64 ವರ್ಷದ ಪುರುಷ, 58 ವರ್ಷದ ಮಹಿಳೆ, ಹನೂರು ತಾಲ್ಲೂಕಿನ ಬಂಡಳ್ಳಿಯ 90 ವರ್ಷದ ಪುರುಷ, 50 ವರ್ಷದ ಪುರುಷ, ಚಾಮರಾಜನಗರ ತಾಲ್ಲೂಕಿನ ಕೆ.ಕೆ.ಹುಂಡಿ ಗ್ರಾಮದ 52 ವರ್ಷದ ಪುರುಷ, ಬಸ್ತಿಪುರದ 70 ವರ್ಷದ ಮಹಿಳೆ, ಅಮಚವಾಡಿಯ 39 ವರ್ಷದ ಪುರುಷ, ಮಂಗಲ ಗ್ರಾಮದ 65 ವರ್ಷದ ಮಹಿಳೆ, ಹರದನಹಳ್ಳಿಯ 40 ವರ್ಷದ ಮಹಿಳೆ, ಕೋಳಿಪಾಳ್ಯ ಗ್ರಾಮದ 45 ವರ್ಷದ ಪುರುಷ, ಚಾಮರಾಜನಗರ ಪಟ್ಟಣದ 42 ವರ್ಷದ ಪುರುಷ, 59 ವರ್ಷದ ಪುರುಷ ಇದ್ದಾರೆ. ಗ್ರಾಮೀಣ ಭಾಗದಿಂದಲೇ ಹೆಚ್ಚು ಸೋಂಕಿತರು ದಾಖಲಾಗುತಿದ್ದು ಬಹುತೇಕ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದವರೇ ಆಗಿದ್ದಾರೆ. ಒಂದೇ ದಿನ ಇಷ್ಟೊಂದು ಸಾವು ಸಂಬವಿಸಿರುವುದರಿಂದ ಜನತೆ ಆತಂಕಿತರಾಗಿದ್ದಾರೆ.
ಶನಿವಾರದ ಸೋಂಕಿತರ ಪೈಕಿ 91 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 576 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 41 ಮಂದಿ ಮಕ್ಕಳೂ ಇದ್ದಾರೆ.