ಬ್ಯಾಡಗಿ: ಕೊರೊನಾ ರೋಗದಿಂದ ಮೃತಪಟ್ಟ ಹಿಂದೂ ಯುವಕನೊಬ್ಬನ ಅಂತ್ಯಕ್ರಿಯೆಯನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಾಲ್ವರು ನೆರವೇರಿಸಿ ಮಾನವೀಯತೆ ಹಾಗೂ ಸೌಹಾರ್ದತೆ ತೋರಿದ ಘಟನೆ ತಾಲೂಕಿನ ಖುರ್ದವೀರಾಪುರದಲ್ಲಿ ಸೋಮವಾರ ನಡೆದಿದೆ.
ಖುರ್ದವೀರಾಪುರದ ಶಿವಪ್ಪ ಮಾರ್ತಾಂಡಪ್ಪ ಕುಮ್ಮೂರು (ಜೋಗಿಹಳ್ಳಿ)(45) ಕಳೆದ ಹಲವು ವರ್ಷದಿಂದ ಪಾವಗಡದಲ್ಲಿ ವಾಸವಾಗಿದ್ದ. ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಈತ ಪತ್ನಿ ಸೇರಿದಂತೆ ಕುಟುಂಬದ ಇನ್ನಿತರ ಸದಸ್ಯರನ್ನು ಬಿಟ್ಟು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ. ಬಳಿಕ ಕೊರೊನಾ ಪರೀಕ್ಷೆ ನಡೆಸಿದಾಗ ಆತನಿಗೆ ಪಾಸಿಟಿವ್ ಆಗಿರುವುದು ತಿಳಿದು ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಮೃತಪಟ್ಟಿದ್ದ.
ಶಿವಪ್ಪ ಮೃತಪಟ್ಟಿರುವುದು ಗ್ರಾಮದಲ್ಲಿ ಸುದ್ದಿಯಾಗಿದ್ದರೂ ಆತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಅಂತಿಮ ಕರ್ಮ ಕ್ರಿಯಾದಿ ನಡೆಸಲು ಹಿಂದೇಟು ಹಾಕಿದ್ದಾರೆ. ಆದರೆ ಅಂತ್ಯಕ್ರಿಯೆಗೆಂದು ತೆರಳಿದ್ದ ಬ್ಯಾಡಗಿ ಪಟ್ಟಣದ ಮನ್ಸೂರ್ ಹಕೀಮ್, ಮುಕ್ತಿಯಾರ್ ಅಹ್ಮದ್ ಮುಲ್ಲಾ, ಅಜೀಜ್ ಬಿಜಾಪುರ, ಹಸನ್ ಕುಪ್ಪೇಲೂರ ಪಿಪಿಇ ಕಿಟ್ ಧರಿಸಿಕೊಂಡು ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದಾರೆ.
ಮುಸ್ಲಿಂ ಸಮುದಾಯದ ನಾಲ್ವರು ಸೇರಿ ಆರೋಗ್ಯ ಇಲಾಖೆಯ ಮಾಲತೇಶ ಕಂಬಳಿ, ಗ್ರಾಮ ಲೆಕ್ಕಾ ಧಿಕಾರಿ ಶಬ್ಬೀರ್ ಬಾಗೇವಾಡಿ, ಮಲ್ಲೂರ ಪಿಡಿಒ ನಾಗರಾಜ ಹಡಗಲಿ, ಬಿಲ್ ಕಲೆಕ್ಟರ್ ಪ್ರಕಾಶ ಬಣಕಾರ ಇವರ ಮಾರ್ಗದರ್ಶನದಲ್ಲಿ ಶಿವಪ್ಪ ಕುಮ್ಮೂರ ಈತನ ಅಂತ್ಯಕ್ರಿಯೆ ಸುಗಮವಾಗಿ ನೆರವೇರಿಸಿಕೊಟ್ಟಿದ್ದಾರೆ.