ಬೆಂಗಳೂರು, ಏಪ್ರಿಲ್ 27; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರಲಿದೆ.
ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಅಗತ್ಯ ಸೇವೆಗಳ ಸರಕು ಸಾಗಣೆಗೆ ಮಾತ್ರ ವಾಹನ ಸಂಚಾರ ಇರುತ್ತದೆ. ಖಾಸಗಿ, ಸರ್ಕಾರಿ ಬಸ್ಗಳ ಸಂಚಾರ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ.
ಬೆಂಗಳೂರು ನಗರದಿಂದ ಇತರ ಪ್ರದೇಶಗಳಿಗೆ ತೆರಳುವ ಜನರು ರಾತ್ರಿ 9 ಗಂಟೆಯೊಳಗೆ ಹೊರಡಬೇಕು. 9 ಗಂಟೆ ಬಳಿಕ ಯಾವುದೇ ಸರ್ಕಾರಿ ಬಸ್ಗಳ ಸಂಚಾರ ಇರುವುದಿಲ್ಲ. ಕೆಎಸ್ಆರ್ಟಿಸಿ ಈ ಕುರಿತು ಟ್ವೀಟ್ನಲ್ಲಿ ಮಾಹಿತಿ ನೀಡಿದೆ.
ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರ ಹೋಗುವ ಜನರು ಹೆಚ್ಚಿದ್ದ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಸುಮಾರು 300 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿತ್ತು.
ಮಂಗಳವಾರ ಬೆಳಗ್ಗೆಯಿಂದಲೂ ಸಹ ಸಾವಿರಾರು ಜನರು ಬೆಂಗಳೂರು ನಗರವನ್ನು ಬಿಟ್ಟು ತವರಿಗೆ ವಾಪಸ್ ಆಗುತ್ತಿದ್ದಾರೆ. ಬೇರೆ ಪ್ರದೇಶಗಳಿಗೆ ಹೋಗುವವರು 9 ಗಂಟೆಗೆ ನಗರದಿಂದ ಹೊರಡಬೇಕು.
ಮಂಗಳವಾರ ರಾತ್ರಿ 9 ರಿಂದ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಗೆ ಬರಲಿದೆ. ಲಾಕ್ ಡೌನ್ ಜಾರಿಗೊಂಡ ಬಳಿಕ ಪೊಲೀಸರು ಫ್ಲೈ ಓವರ್, ರಸ್ತೆಗಳನ್ನು ಬಂದ್ ಮಾಡಲಿದ್ದಾರೆ. ಜನರು ಖಾಸಗಿ ವಾಹನಗಳ ಮೂಲಕವೂ ಸಂಚಾರ ನಡೆಸುವಂತಿಲ್ಲ.
ಜನರು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮುಂಜಾನೆ 6 ರಿಂದ ದ 10 ಗಂಟೆಯ ತನಕ ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್ಗಳಲ್ಲಿ ಪಾರ್ಸೆಲ್ಗಳನ್ನು ಪಡೆಯಲು ಅವಕಾಶವಿದೆ.
ಆದ್ಯ ಗಮನಕ್ಕೆ
ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳು ಇಂದು ರಾತ್ರಿ 9 ರ ಮೊದಲು ಹೊರಡಲಿವೆ. ಪರಿಷ್ಕೃತ ನಿರ್ಗಮನ ಸಮಯಕ್ಕಾಗಿ https://t.co/jnSXtGfwMG ನಲ್ಲಿ ದಯವಿಟ್ಟು ಪಿಎನ್ಆರ್ ಸ್ಥಿತಿಯನ್ನು ಪರಿಶೀಲಿಸಿ.
— KSRTC (@KSRTC_Journeys) April 27, 2021