ಬೆಳಗಾವಿ: ಮಳೆಯಿಂದ ರಕ್ಷಿಸಿಕೊಳ್ಳಲು ಗಿಡದ ಕೆಳಗೆ ನಿಂತಾಗ ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ನಗರದ ಕಣಬರ್ಗಿ ರಸ್ತೆಯ ಸುರಭಿ ಹೊಟೇಲ್ ಹಿಂಬಾಗದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮೂಲ ಬೈಲಹೊಂಗಲ ತಾಲೂಕಿನ ಹೋಗರ್ತಿಯ, ಸದ್ಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳದಲ್ಲಿ ನೆಲೆಸಿದ್ದ ಪ್ರಕಾಶ ಕರೆಪ್ಪ ವ್ಯಾಪಾರಗಿ(44) ಹಾಗೂ ಗೋಕಾಕ ತಾಲೂಕಿನ ರಾಜನಕಟ್ಟೆ ಗ್ರಾಮದ ಭರಮಪ್ಪ ಭೀಮಪ್ಪ ಬಾದರವಾಡಿ(39) ಎಂಬಾತರು ಮೃತಪಟ್ಟಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಸುರಭಿ ಹೊಟೇಲ್ ಹಿಂಬಾಗದ ಹೊಲದ ಬಳಿ ಕೂಲಿ ಕೆಲಸಕ್ಕೆ ಬಂದಿದ್ದರು,. ಶುಕ್ರವಾರ ಮಧ್ಯಾಹ್ನ ಸುರಿದ ಗಾಳಿ-ಮಳೆಯಿಂದ ರಕ್ಷಿಸಿಕೊಳ್ಳಲು ಗಿಡದ ಕೆಳಗೆ ನಿಂತಿದ್ದರು. ಸಿಡಿಲಿನ ಹೊಡೆತಕ್ಕೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.