ಧಾರವಾಡ, ಏಪ್ರಿಲ್ 22; ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಧಾರವಾಡದಲ್ಲಿಯೂ ಕರ್ಫ್ಯೂ ಜಾರಿಯಲ್ಲಿದೆ. ಧಾರವಾಡ ತಹಶೀಲ್ದಾರ್ ಸಂತೋಷ್ ಬಿರಾದಾರ್ ಮತ್ತು ಜಿಲ್ಲಾಧಿಕಾರಿ ನಿತೇಶ ಪಾಟೀಲ ರಾತ್ರಿ ಕರ್ಪ್ಯೂ ಜಾರಿ ಬಗ್ಗೆ ನಗರದಲ್ಲಿ ಪರಿಶೀಲನೆ ನಡೆಸಿದರು.
ಸೆಕ್ಷನ್ 144 ಅನ್ವಯ ಜಾರಿಗೊಳಿಸಿರುವ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವ ಕುರಿತು ನಗರದ ವಿವಿಧ ಬಡಾವಣೆಗಳಲ್ಲಿ ತಪಾಸಣೆ ನಡೆಸಿದರು. ಅಂಗಡಿ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದರು.
ಸೂಪರ್ ಮಾರ್ಕೆಟ್, ಸುಭಾಷ್ ರಸ್ತೆ, ಲೈನ್ ಬಜಾರ್, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ನರೇಂದ್ರ ಕ್ರಾಸ್ ತನಕ ಸಂಚರಿಸಿದರು.
ನರೇಂದ್ರ ಕ್ರಾಸ್ನಲ್ಲಿ ಆದೇಶ ಉಲ್ಲಂಘಿಸಿ 9 ಗಂಟೆ ನಂತರವು ಮಾವಿನ ಹಣ್ಣಿನ ಅಂಗಡಿ ತೆರೆಯಲಾಗಿತ್ತು. ಅಂಗಡಿ ಮಾಲೀಕನಿಗೆ ದಂಡ ವಿಧಿಸಿ, ತಕ್ಷಣ ಬಂದ್ ಮಾಡಿಸಿದರು.
ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂವನ್ನು ಘೋಷಣೆ ಮಾಡಿದೆ. ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ.
ಬುಧವಾರ ಧಾರವಾಡದಲ್ಲಿ 379 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 26035. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1909.