ಬೆಂಗಳೂರು: 6ನೇ ವೇತನ ಆರೋಗ ಶಿಫಾರಸುಗಳನ್ನು ಜಾರಿ ಮಾಡುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆ 11ನೇ ದಿನದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಈಗ ಇಲಾಖೆ ಅವರು ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ ಅಂತ ಹೇಳಿದರೆ ನಮ್ಮ ದೂರನ್ನ ಪರಿಗಣಿಸಿ ಸಂಬಳ ಕೊಡಿಸುವ ಕೆಲಸ ಮಾಡಬೇಕಿತ್ತು. ಆದರೆ ಕಾರ್ಮಿಕರ ಅಧಿಕಾರಿಗಳು ಕೈಚೆಲ್ಲಿ ಕುಳಿತ್ತಿದ್ದಾರೆ. ನೌಕರರಿಗೆ ಸಂಬಳ ನೀಡಿಲ್ಲ, ಯುಗಾದಿ ಹಬ್ಬವನ್ನ ಯಾರೂ ಸಹ ಮಾಡಿಲ್ಲ. ಹೀಗಾಗಿ ನಾಳೆ ಆಯುಕ್ತರೊಂದಿಗೆ ಮಾತಾನಾಡಲು ತಯಾರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಯಾವುದೋ ಖಾಸಗಿ ವಾಹನಗಳ ಚಾಲಕರನ್ನು ಕರೆದುಕೊಂಡು ಬಂದು ವಾಹನಗಳನ್ನು ಓಡಿಸುತ್ತಿದ್ದಾರೆ. ಆದರೆ ಅವರು ಗಾಡಿ ಓಡಿಸುವುದಾದರೆ ಸಾರ್ವಜನಿಕರ ಜೀವವನ್ನು ಪರಿಗಣಿಸಬೇಕಾಗುತ್ತದೆ. ಸಿಎಂ ಅವರು ನಮ್ಮ ಜೊತೆ ಮಾತನಾಡಬಹುದಾಗಿತ್ತು. ನಮ್ಮ ಜೊತೆ ಯಾಕೆ ನೀವು ಮಾತನಾಡಲು ಹಿಂಜರಿಯುತ್ತಿದ್ದೀರಾ? ಈಗಾಗಲೇ ಸಿಎಂ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ನಾಳೆ ಆಯುಕ್ತರೊಂದಿಗೆ ಚರ್ಚಿಸಲಿದ್ದೇವೆ ಎಂದರು.
ಸರ್ಕಾರ ವಾಹನಗಳ ಬಗ್ಗೆ ತೋರಿಸುತ್ತಿರುವ ಅಂಕಿ ಅಂಶ ಶುದ್ಧ ಸುಳ್ಳು. ಖಾಸಗಿ ವಾಹನಗಳನ್ನು ತಂದು ಸಾರಿಗೆ ನೌಕರರಿಗೆ ಮೋಸ ಮಾಡಲು ಹೊರಟಿದ್ದೀರಾ? ಬೆಂಗಳೂರಲ್ಲಿ ಎಷ್ಟು ಬಸ್ಸುಗಳು ಓಡಾಡುತ್ತಿವೆ ಎಂದು ಸಾರಿಗೆ ಸಚಿವರು ಗಮನಹರಿಸಬೇಕು. ಸಾರಿಗೆ ನೌಕರರು ಈಗಾಗಲೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಮೊಂಡುತನ ಮಾಡುವುದು ಒಳ್ಳೆಯದಲ್ಲ. ಸಾರಿಗೆ ನೌಕರರ ಕುಟುಂಬಗಳು ಬೀದಿಗೆ ಬರುವ ರೀತಿ ಮಾಡಬೇಡಿ ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬನ್ನಿ ಅಂತಾ ಮನವಿ ಮಾಡಿಕೊಂಡರು.
ಸಾರಿಗೆ ಸಚಿವರು ಸಾಕಷ್ಟು ಸಾರಿಗೆ ನೌಕರರನ್ನು ಕೆಲಸದಿಂದ ತೆಗೆದಿದ್ದಾರೆ. ಹಲವು ನೌಕರರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಆದರೆ ಸಾರಿಗೆ ನೌಕರರು ಕೇಳುತ್ತಿರುವುದಾದರೂ ಏನು? ಅವರ ಹಕ್ಕುಗಳನ್ನ ಕೇಳುತ್ತಿದ್ದಾರೆ. ಆ ಹಕ್ಕುಗಳನ್ನ ಕೊಡುವುದನ್ನ ಬಿಟ್ಟು ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು.