ಹಾಸನ: ತಮ್ಮನನ್ನು ಮದುವೆಯಾಗಲು ಒಪ್ಪದ ಯುವತಿಯರಿಬ್ಬರ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಾವು ಗ್ರಾಮದಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಹೋದರಿಯರಾದ ಯೋಗಿತಾ ಮತ್ತು ಪುಷ್ಪಿತಾ ಹಲ್ಲೆಗೊಳಗಾದವರು. ನಾಗರಾಜ್ ಹಲ್ಲೆ ಮಾಡಿದವ. ಈತನ ಸೋದರ ಮಾವನ ಮಕ್ಕಳು ಯೋಗಿತಾ ಮತ್ತು ಪುಷ್ಪಿತಾ. ಏ.12ರಂದು ಯೋಗಿತಾಳ ಜತೆ ತನ್ನ ತಮ್ಮನ ಮದುವೆ ಮಾತುಕತೆಗೆಂದು ತಾಯಿ ಹಾಗೂ ಅಜ್ಜಿ ಜತೆ ಸೋದರ ಮಾವನ ಮನೆಗೆ ನಾಗರಾಜ್ ಬಂದಿದ್ದ.
ಈ ವೇಳೆ ಅಕ್ಕ-ತಂಗಿ ಇಬ್ಬರೂ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದಾರೆ. ನಾವಿಬ್ಬರೂ ಎಂಎಸ್ಸಿ ಓದಿಕೊಂಡಿದ್ದು, ನಿನ್ನ ತಮ್ಮನನ್ನು ಮದುವೆ ಆಗಲ್ಲ ಎಂದು ನಾಗರಾಜ್ಗೆ ಹೇಳಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ನಾಗರಾಜ್ ಯುವತಿಯರಿಬ್ಬರ ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಸಹೋದರಿಯರನ್ನ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ನಾಗರಾಜ್, ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಬಂಧಿಸಲಾಗಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.