ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಸರಕಾರಕ್ಕೆ ಯುಗಾದಿ ಹಬ್ಬದ ಗಡುವು ನೀಡಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಅರಿತು ಮುಷ್ಕರ ನಿರತರನ್ನು ಮಾತುಕತೆಗೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರವಿವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಮುಷ್ಕರ ನಿರತರೊಂದಿಗೆ ಮಾತನಾಡುವುದಿಲ್ಲ ಎಂದು ಪದೇಪದೆ ಹೇಳುತ್ತಿದೆ. ಈ ಹಿಂದೆ ಆರನೇ ವೇತನ ಆಯೋಗ ಜಾರಿಗೆ ಒಪ್ಪಿರುವ ಸರಕಾರ ಈಗ ಮಾತಿಗೆ ತಪ್ಪಿದೆ ಎಂದರು.
ಮಾ.16ರಂದು ಮುಷ್ಕರದ ನೋಟಿಸ್ ನೀಡಿದ ಬಳಿಕ ಬೇಡಿಕೆ ಈಡೇರಿಸಲು 22 ದಿನಗಳ ಕಾಲಾವಕಾಶವಿತ್ತು. ಈ ಅವಧಿಯಲ್ಲಿ ಮುಖ್ಯಮಂತ್ರಿ ಅಥವಾ ಸಾರಿಗೆ ಸಚಿವರೊಂದಿಗೆ ಒಂದೇ ಒಂದು ಮಹತ್ವದ ಮಾತುಕತೆ ನಡೆದಿಲ್ಲ. ಆದರೆ, ಕಾರ್ಮಿಕ ಇಲಾಖೆಯು ಸರಕಾರದ ಒತ್ತಡಕ್ಕೆ ಮಣಿದು ಮುಷ್ಕರದ ನಾಲ್ಕನೇ ದಿನ ಈ ಮುಷ್ಕರ ಊರ್ಜಿತವಲ್ಲ ಎಂದು ಆದೇಶಿಸಿದೆ. ಈ ಮೂಲಕ ಕಾರ್ಮಿಕ ಇಲಾಖೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಮುಖ್ಯಮಂತ್ರಿಯವರು ನೆಪ ಹೇಳದೆ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.