ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೇ 24ರಿಂದ ಪಿಯುಸಿ ಹಾಗೂ ಜೂನ್ 20ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳು ಸುರಕ್ಷತಾ ಕೇಂದ್ರಗಳು ಆಗಿರುತ್ತೆ. ಎಸ್ಎಸ್ಎಲ್ಸಿಗೆ 8,75,798 ಜನ ವಿದ್ಯಾರ್ಥಿಗಳ ನೋಂದಣಿಯಾಗಿದೆ. ಪಿಯುಸಿಗೆ 7,01,651 ಮಂದಿ ವಿದ್ಯಾರ್ಥಿಗಳನ್ನು ನೋಂದಣಿ ಮಾಡಲಾಗಿದೆ ಎಂದು ವಿವರಿಸಿದರು.
ಸಿಲೇಬಸ್ ನಲ್ಲಿ ಶೇ.30ರಷ್ಟು ಕಡಿಮೆ ಮಾಡಿ 90ರಷ್ಟು ಪಾಠ ಪ್ರವಚನಗಳು ಮುಗಿದಿವೆ. ಕೊರೊನಾ ಮಧ್ಯೆಯೂ ಪರೀಕ್ಷೆ ನಡೆಸುವುದು ನಮ್ಮ ಕರ್ತವ್ಯ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೇ ನಿಜವಾದ ಕೊರೊನಾ ವಾರಿಯರ್ಸ್ ಆಗಿರುತ್ತಾರೆ. ಕೊರೊನಾ ವಿರುದ್ಧ ಅಸಹಕಾರ ಚಳವಳಿ ಆಗಬೇಕು. ಕೊರೊನಾ ಏಪ್ರಿಲ್ ನಲ್ಲಿ ಹೆಚ್ಚಾಗುತ್ತೆ ಮೇ ನಲ್ಲಿ ಕಡಿಮೆಯಾಗುತ್ತೆ ಅನ್ನೊ ವರದಿಗಳಿವೆ ಎಂದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಆರಂಭಿಸಲಾಗುವುದು. ಕೊರೊನಾ ಜೊತೆ ಬದುಕು ಅನಿವಾರ್ಯವಾಗಿದೆ. ಖಾಸಗಿ ಶಾಲಾ ಟ್ಯೂಷನ್ ಪೀಸ್ ವಿಚಾರ ಹೈಕೋರ್ಟಿನಲ್ಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯಿಂದಲೆ ಒಂದು ಟಿವಿ ಚಾನಲ್ ಆರಂಭಿಸುವ ಪ್ರಸ್ತಾಪವಿದೆ ಎಂದು ಸಚಿವರು ಹೇಳಿದರು.